ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ನೇಮಕ: ಬಹುಮತ ಸಾಬೀತಿಗೂ ಮುನ್ನ ಜೆಡಿಎಸ್ ರೆಬೆಲ್ ಶಾಸಕರು ಅನರ್ಹ?

Public TV
2 Min Read

ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕ್ಷಣಕ್ಕೂ ರೋಚಕ ತಿರುವು ಪಡೆದಕೊಳ್ಳುತ್ತಿದ್ದು, ಹಂಗಾಮಿ ಸ್ಪೀಕರ್ ಆಗಿ ಕೊಡಗಿನ ವಿರಾಜಪೇಟೆಯ ಶಾಸಕ ಬೋಪಯ್ಯ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿಆರ್ ವಾಲಾ, ಬೋಪಯ್ಯ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಮೂಲಕ ಎರಡನೇ ಬಾರಿ ಸ್ಪೀಕರ್ ಹುದ್ದೆಯನ್ನು ಬೋಪಯ್ಯ ಅಲಂಕರಿಸಿದ್ದಾರೆ.

ಸಾಧಾರಣವಾಗಿ ವಿಧಾನಸಭೆಯ ಹಿರಿಯ ಸದಸ್ಯರನ್ನು ಸ್ಪೀಕರ್ ಆಗಿ ನೇಮಕ ಮಾಡಲಾಗುತ್ತದೆ. ಹೀಗಾಗಿ ದೇಶಪಾಂಡೆ ಅವರನ್ನು ನೇಮಕ ಮಾಡಲಾಗುತ್ತದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಬೋಪಯ್ಯ ಅವರನ್ನು ನೇಮಕ ಮಾಡುವ ಮೂಲಕ ಬಿಜೆಪಿ ರಣತಂತ್ರ ಹೆಣೆದಿದ್ದು ಕಾಂಗ್ರೆಸ್ ಸೇರಿದ್ದ ಮೂವರು ಜೆಡಿಎಸ್ ಶಾಸಕರು ಬಹುಮತ ಸಾಬೀತಿಗೂ ಮುನ್ನ ಅನರ್ಹರಾಗುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಹಂಗಾಮಿ ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇಲ್ಲ. ಅಷ್ಟೇ ಅಲ್ಲದೇ ಇವರು ವಿಚಾರಣೆಯೇ ನಡೆಸಿಲ್ಲ. ವಿಚಾರಣೆ ನಡೆಸದೇ ಅನರ್ಹಗೊಳಿಸಲು ಸಾಧ್ಯವಿಲ್ಲ. ಆದದ್ದು ಆಗಲಿ ಮುಂದೆ ಏನಾಗುತ್ತದೋ? ಆದದ್ದು ಆಗಲಿ ಎಂದು ಭಾವಿಸಿ ಧೈರ್ಯ ಮಾಡಿ ಅನರ್ಹ ಮಾಡಿದರೆ ಸದನದಲ್ಲಿ ಸಂಖ್ಯಾಬಲ ಕಡಿಮೆಯಾಗುತ್ತದೆ. ಈಗ ಅನರ್ಹ ಮಾಡಿದರೂ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಬಹುದು ಎಂದು ತಿಳಿಸಿದರು.

ಏನಿದು ಪ್ರಕರಣ?
ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಭೀಮಾ ನಾಯ್ಕ್, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ್ ಮೂರ್ತಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಇದನ್ನು ಪ್ರಶ್ನಿಸಿ ಜೆಡಿಎಸ್ ಸ್ಪೀಕರ್ ಗೆ ದೂರು ನೀಡಿತ್ತು. ಸ್ಪೀಕರ್ ಕೋಳಿವಾಡ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಚುನಾವಣೆ ದಿನಾಂಕ ಪ್ರಕಟವಾದರೂ ತನ್ನ ತೀರ್ಪನ್ನು ಪ್ರಕಟಿಸದ ಕಾರಣ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 7ರ ಒಳಗಡೆ ತೀರ್ಪು ನೀಡುವಂತೆ ಆದೇಶಿಸಿತ್ತು.

ಸ್ಪೀಕರ್ ಚರ್ಚೆ:
ನಂಬರ್ ಗೇಮ್ ನಲ್ಲಿ ಸ್ಪೀಕರ್ ಬೋಪಯ್ಯ ಅವರು ಜೆಡಿಎಸ್ ರೆಬೆಲ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ ಮತ್ತು ಜಮೀರ್ ಅಹ್ಮದ್ ಅವರನ್ನು ಅನರ್ಹಗೊಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಕಾನೂನು ತಜ್ಞರ ಸ್ಪೀಕರ್ ಚರ್ಚೆ ನಡೆಸುತ್ತಿದ್ದಾರೆ.

ಜಮೀರ್ ಅಹ್ಮದ್ ಚಾಮರಾಜಪೇಟೆ, ಪುಲಿಕೇಶಿ ನಗರದಿಂದ ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಜಯಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *