ರಾಜ್ಯದ ಜನರಿಗೆ ಸೋಮವಾರ ಬಂಪರ್ ಗಿಫ್ಟ್?

Public TV
1 Min Read

ಬೆಂಗಳೂರು: ರಾಜಸ್ಥಾನ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅನುಸರಿಸಿದ್ದು ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆಯಿದೆ.

ಸಿಎಂ ಕುಮಾರಸ್ವಾಮಿ ಅವರು ಸೋಮವಾರದಿಂದ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಮೇಲಿನ ಸೆಸ್ ಕಡಿತಗೊಳಿಸಿ ಬಂಪರ್ ಗಿಫ್ಟ್ ಕೊಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಸಮ್ಮಿಶ್ರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಹೆಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು. ಆದರೆ ಬಂದ್ ದಿನವೇ ಸೆಸ್ ಇಳಿಸುವ ಸುಳಿವನ್ನು ನೀಡಿದ್ದರು. ಇದರಂತೆ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರಿಂದ 3 ರೂ. ಇಳಿಕೆಯಾಗುವ ಸಾಧ್ಯತೆಯಿದೆ.

ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರ ವಿಧಿಸುವ ಸೆಸ್ ಕಡಿಮೆಯಾದರೂ ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಿರುವ ಕಾರಣ ಸೆಸ್ ಕಡಿಮೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇತ್ತ ತೈಲ ಬೆಲೆ ನಿತ್ಯ ಹೆಚ್ಚಾಗುತ್ತಿದ್ದು ಇಂದು ಕೂಡ ಲೀಟರ್ ಪೆಟ್ರೋಲ್‍ಗೆ 28 ಪೈಸೆ, ಲೀಟರ್ ಡೀಸೆಲ್‍ಗೆ 18 ಪೈಸೆ ಏರಿಕೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *