ಮಗುವಿಗೆ ಹತ್ತು ದಿನಗಳಾದ್ರೂ ಸ್ನಾನ ಮಾಡಿಸಿಲ್ಲ: ಬಾಣಂತಿಯ ಕಣ್ಣೀರು

Public TV
1 Min Read

-ಗಳಿಸಿದ್ದ ಅಷ್ಟಿಷ್ಟು ಆಸ್ತಿಯನ್ನು ನುಂಗಿದ ನೀರು

ಬೆಳಗಾವಿ: ಪ್ರವಾಹ ಸ್ಥಳವನ್ನು ಆಕ್ರಮಿಸಿಕೊಳ್ಳುವದರ ಜೊತೆಗೆ ಜನರ ಬದುಕಿನಲ್ಲಿ ಕತ್ತಲೆಯನ್ನು ಮೂಡಿಸಿದೆ. ಗ್ರಾಮಗಳಿಗೆ ನೀರು ಆಗಮಿಸುತ್ತಲೇ ಜನರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕಳೆದ 15 ದಿನಗಳಿಂದಲೂ ಶಿಬಿರದಲ್ಲಿ ಉಳಿದುಕೊಂಡಿರುವ ಪ್ರತಿಯೊಬ್ಬರದ್ದು ಒಂದೊಂದು ನೋವಿನ ಕಥೆ. ನಿರಾಶ್ರಿತರ ಶಿಬಿರದಲ್ಲಿ ಬಾಣಂತಿ, ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲ ವರ್ಗದ ಜನ ಉಳಿದುಕೊಂಡಿದ್ದಾರೆ.

ಗೋಕಾಕ್ ನಿರಾಶ್ರಿತರ ಶಿಬಿರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಾಣಂತಿ, ಮಗುವಿಗೆ ಹತ್ತು ದಿನಗಳಾದ್ರು ಕಂದನಿಗೆ ಸ್ನಾನ ಮಾಡಿಸಲು ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಕಂದನನ್ನು ಚೆನ್ನಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಮನೆಗೆ ನೀರು ಬಂದ ಕೂಡಲೇ ಕೆಲ ಬಟ್ಟೆಯೊಂದಿಗೆ ಶಿಬಿರದಲ್ಲಿ ಬಂದು ಉಳಿದುಕೊಂಡಿದ್ದೇವೆ ಎಂದು ಬಾಣಂತಿ ಭಾವುಕರಾದರು.

ಬಾಣಂತಿ ಮಗಳು, ಮೊಮಕ್ಕಳನ್ನು ಕರೆದುಕೊಂಡು ಶಿಬಿರಕ್ಕೆ ಬಂದು 10 ದಿನಗಳ ಕಳೆದಿವೆ. ಬಾಣಂತಿ ಮತ್ತು ಮಗುವಿಗೆ ಹತ್ತು ದಿನಗಳಾದ್ರೂ ಸ್ನಾನ ಮಾಡಿಸಿಲ್ಲ. ಇದೇ ಮೊದಲ ಬಾರಿ ಈ ರೀತಿ ತೊಂದರೆಯನ್ನು ಅನುಭವಿಸುತ್ತಿದೆ. ಮನೆ ತೊರೆದು ಹತ್ತು ದಿನಗಳಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ಬಟ್ಟೆಯನ್ನು ಧರಿಸಿಕೊಳ್ಳಲು ಅಧಿಕಾರಿಗಳು ನೀಡಿದ್ದಾರೆ ಎಂದು ಬಾಣಂತಿ ತಾಯಿ ಹೇಳುತ್ತಾರೆ.

ಜೀವಮಾನದಲ್ಲಿ ಗಳಿಸಿದ್ದ ಅಲ್ಪಸ್ವಲ್ಪ ಆಸ್ತಿಯನ್ನು ನೀರು ನುಂಗಿಕೊಂಡಿದೆ. ಮನೆಯಲ್ಲಿಯ ಎಲ್ಲ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ಪ್ರವಾಹ ಬಡವರನ್ನು ಬೀದಿಗೆ ತಂದು ನಿಲ್ಲಿಸಿದೆ. ನಿರಾಶ್ರಿತರ ಶಿಬಿರದಲ್ಲಿ ಸರ್ಕಾರ ಮತ್ತು ಸ್ಥಳೀಯರು ಆಹಾರ ನೀಡುತ್ತಿದ್ದಾರೆ. ಬೇರೆಯವರು ನೀಡಿದ ಆಹಾರವನ್ನು ಎಂಟರಿಂದ ಹತ್ತು ದಿನ ತಿನ್ನಬಹುದು. ಹಾಗಾಗಿ ಸರ್ಕಾರ ನಮಗೆ ಶಾಶ್ವತ ಪರಿಹಾರವನ್ನು ನೀಡಬೇಕೆಂದು ನಿರಾಶ್ರಿತ ಮಹಿಳೆ ಪಬ್ಲಿಕ್ ಟಿವಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *