ಬೆಳಗಾವಿ: ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮಾರಾಭ್ಯಾಸ ‘ಎಕುವೆರಿನ್’ ಬೆಳಗಾವಿಯಲ್ಲಿ ಆರಂಭವಾಗಿದೆ. ಜಿಲ್ಲೆಯ ಮರಾಠ ಲಘು ಪದಾತಿ ದಳ ಇಡೀ ದೇಶದಲ್ಲಿಯೇ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿದ್ದು, ಇಂತಹ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದೆ.
ಬೆಳಗಾವಿಯ ಶಿವಾಜಿ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಜಂಟಿ ಸಮಾರಾಭ್ಯಾಸ 14 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಮಾಲ್ಡೀವ್ಸ್ ದೇಶದ 90 ಸೈನಿಕರು ಬೆಳಗಾವಿಗೆ ಆಗಮಿಸಿದ್ದಾರೆ. ಸಮಾರಾಭ್ಯಾಸ ಪ್ರದರ್ಶನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಭಾರತದ ಮರಾಠ ಲಘುಪದಾತಿದಳ (ಎಂಎಲ್ಐಆರ್ಸಿ) ದೇಶದಲ್ಲಿ ಅತ್ಯುನ್ನತ ಕಮಾಂಡೋ ಟ್ರೈನಿಂಗ್ ಖ್ಯಾತಿ ಗಳಿಸಿದೆ. ಭಾರತೀಯ ಸೇನೆಯ ಸಿರ್ಮೂರ್ ರೈಫಲ್ ಬೆಟಾಲಿಯನ್ ತಂಡದ ಸದಸ್ಯರು, ನೌಕಾಪಡೆಯ ಸೈನಿಕರು, ಮಾಲ್ಡೀವ್ಸ್ ಸೈನಿಕರು ಒಟ್ಟಿಗೆ ಅಭ್ಯಾಸ ನಡೆಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರು ಹಲವು ಬಗೆಯ ರೋಚಕ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಎಲ್ಐಆರ್ಸಿ ಬ್ರಿಗೇಡಿಯರ್, ಗೋವಿಂದ ಕವಲಾಡ್, ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಭಯೋತ್ಪದನಾ ಚಟುವಟಿಕೆಯನ್ನು ನಿಯಂತ್ರಿಸಲು ಎರಡು ದೇಶಗಳ ನಡುವೆ ಸಾಮರ್ಥ್ಯ ಮತ್ತು ಕಲೆಯ ವಿನಿಮಯಕ್ಕೆ ಈ ಜಂಟಿ ಸಮರಾಭ್ಯಾಸ ಆಯೋಜನೆ ಮಾಡಲಾಗಿದೆ. ಇದರಿಂದ ಎರಡು ದೇಶಗಳಿಗೆ ಉಪಯೋಗ ಆಗಲಿದೆ ಎಂದರು.
ಈ ಉದ್ಘಾಟನಾ ಸಮಾರಂಭದಲ್ಲಿಯೇ ಮೊದಲು ಬ್ರಿಗೇಡಿಯರ್ ಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಪೈಪ್ ಬ್ಯಾಂಡ್, ಬೆಂಗಾಲ್ ಎಂಜನಿಯರಿಂಗ್ ಗ್ರೂಪ್ ಕರ್ಕಿ ನಡೆಸಿದ ಮಾರ್ಷಲ್ ಆರ್ಟ್ ಆಕರ್ಷಕವಾಗಿತ್ತು. ಸೈನಿಕರು ತಲ್ವಾರ ಕಲೆ, ಟ್ಯೂಬ್ ಲೈಟ್ ಒಡೆಯುವುದು, ಮುಳ್ಳಿನ ಹಾಸಿನ ಮೇಲೆ ಮಲಗೋ ರೋಚಕ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
ಬೆಳಗಾವಿಯ ಎಂಎಲ್ಐಆರ್ಸಿ ಯಲ್ಲಿ ಮಾಲ್ಡೀವ್ಸ್ ಸೈನಿಕರು 14 ದಿನ ಜಂಟಿ ಸಮಾರಾಭ್ಯಾಸದ ಮೂಲಕ ಎರಡು ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಇದರ ಭಾಗವಾಗಿ ಈ ಸಮರಾಭ್ಯಾಸ ನಡೆಯುತ್ತಿದೆ. ಈಗಾಗಲೇ ದೇಶದಲ್ಲಿ ಅತ್ಯಾಧುನಿಕ ಕಮಾಂಡೋ ಟ್ರೈನಿಂಗ್ ಹೊಂದಿರುವ ಬೆಳಗಾವಿಯಲ್ಲಿ ಈ ಜಂಟಿ ಸಮರಾಭ್ಯಾಸ ನಡೆಯುತ್ತಿರೋದು ಹೆಮ್ಮೆಯ ಸಂಗತಿಯಾಗಿದೆ.