ಆನ್‍ಲೈನ್‍ನಲ್ಲಿ ದೇಗುಲಕ್ಕೆ ಕಾಣಿಕೆ – ಯೋಜನೆಗೆ ಬುಧವಾರ ಸಿಎಂ ಚಾಲನೆ

Public TV
2 Min Read

ಬೆಂಗಳೂರು: ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ (Integrated Temple Management System – ITMS) ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಲೋಕಾರ್ಪಣೆಗೊಳಿಸಲಿದ್ದಾರೆ.

ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್‍ಸೈಟ್‍ನಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ/ಭಕ್ತಾಧಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಸದರಿ ಮಾಹಿತಿಗಳನ್ನು ಅಪ್ ಲೋಡ್ ಮಾಡುವ ವ್ಯವಸ್ಥೆಯಿದೆ. ದೇವಾಲಯಗಳ ಆಸ್ತಿಗಳ ವಿವರ ಮತ್ತು ಅವುಗಳ ವಹಿವಾಟಿನ ಮಾಹಿತಿಗಳೂ ಇರಲಿವೆ. ಜಗತ್ತಿನ ಯಾವುದೇ ಭಾಗದಿಂದ ಆನ್‍ಲೈನ್ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ಸರ್ಕಾರದ ಭೂ ದಾಖಲೆಗಳ ದತ್ತಾಂಶದೊಂದಿಗೆ (Bhoomi etc) ಸಂಯೋಜನೆ ಮಾಡಬಹುದಾದ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ವಿವಿಧ ರೀತಿಯ MIS ವರದಿಗಳನ್ನು ಪಡೆಯಲು ಅವಕಾಶವಿರುತ್ತದೆ. ಇದನ್ನೂ ಓದಿ: ಕಡ್ಡಾಯ ಮಾಡಬಾರದು, ಹಿಜಬ್ ಧರಿಸುವುದು ಮಹಿಳೆಯರ ಆಯ್ಕೆಗೆ ಬಿಡಬೇಕು: ಸರ್ಕಾರ

ದೈವ ಸಂಕಲ್ಪ ಯೋಜನೆ:
ಇದೇ ವೇಳೆ ದೈವ ಸಂಕಲ್ಪ ಯೋಜನೆಗೂ ಸಿಎಂ ಚಾಲನೆ ನೀಡಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿರುವ 205ಎ ದರ್ಜೆಯ ದೇವಾಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ದೈವ ಸಂಕಲ್ಪ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಪ್ರಥಮ ಹಂತದಲ್ಲಿ ರಾಜ್ಯದ ಪ್ರಮುಖ 25 ದೇವಾಲಯಗಳನ್ನು 1,140 ಕೋಟಿ ರು ಅಂದಾಜು ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದನ್ನೂ ಓದಿ: ರಾಜ್ಯದ 25A ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ‘ದೈವ ಸಂಕಲ್ಪ’ ಯೋಜನೆ: ಶಶಿಕಲಾ ಜೊಲ್ಲೆ

ಲಕ್ಷಾಂತರ ಭಕ್ತರು ಆಗಮಿಸುವ ಕುಕ್ಕೆ ಸುಬ್ರಹ್ಮಣ್ಯ, ಮಲೈ ಮಹದೇಶ್ವರ ಸ್ವಾಮಿ ಬೆಟ್ಟ, ಚಾಮುಂಡಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ, ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಸವದತ್ತಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳು ಈ ಯೋಜನೆಯ ಅಡಿಯಲ್ಲಿ ಸೇರಿವೆ. ಭಕ್ತಾದಿಗಳಿಗೆ ವಸತಿ ಸೌಲಭ್ಯ, ಉತ್ತಮ ರಸ್ತೆ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಾರಂಪರಿಕ ಶಿಲಾಮಯ ಕಟ್ಟಡಗಳ ನಿರ್ಮಾಣ, ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಸ್ನಾನ ಘಟ್ಟ ಹಾಗೂ ಸುಸಜ್ಜಿತ ಅನ್ನದಾಸೋಹ ಭವನ, ವಾಣಿಜ್ಯ ಸಂಕೀರ್ಣ ಕಟ್ಟಡಗಳು, ಶೌಚಾಲಯಗಳು, ಒಳಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕ, ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಅಭಿವೃದ್ಧಿ ಗೊಳಿಸಲಾಗುವುದು. ದೇಶದ ಧಾರ್ಮಿಕ ಕ್ಷೇತ್ರಗಳನ್ನು ಸಮಗ್ರ ವಾಗಿ ಅಭಿವೃದ್ಧಿ ಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯು ಈ ಯೋಜನೆಗಳ ಮೂಲಕ ದಾಪುಗಾಲು ಇಟ್ಟಿದೆ.

ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಆಯುಕ್ತರಾದ ರೋಹಿಣಿ ಸಿಂಧೂರಿ ಭಾಗವಹಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *