ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

Public TV
2 Min Read

ಬೆಂಗಳೂರು: ಬೇರೆ ಬೇರೆ ಕಡೆ ಗೆದ್ದಾಗ, ಚುನಾವಣಾ ಆಯೋಗ ಸರಿಯಿದೆ. ಸೋತಾಗ ಸರಿಯಿಲ್ಲ ಅಂತಾರೆ. ಆದರೆ ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಕಿಡಿಕಾರಿದರು.

ಭಾರೀ ಹೈಡ್ರಾಮಾದ ಬಳಿಕ ಜಯನಗರ ಗೊಂದಲಕ್ಕೆ ತೆರೆ ಬಿದ್ದಿದೆ. ಜಯನಗರ (Jayanagar Constituency) ದಲ್ಲಿ ಬಿಜೆಪಿ (BJP) ಅಭ್ಯರ್ಥಿ ರಾಮಮೂರ್ತಿ (Ramamurthy) ಗೆಲುವು ತನ್ನದಾಗಿಸಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಮೋಸ ಮಾಡಿ ಗೆದ್ದಿದ್ದಾರೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯನೇ ನೇರ ಕಾರಣ ಎಂಬ ರಾಮಲಿಂಗರೆಡ್ಡಿ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ಒಂದೇ ಸಲ ಮರು ಮತ ಎಣಿಕೆಯಾಗಿದೆ. ನಮ್ಮ ಅಭ್ಯರ್ಥಿ ಕರೆ ಮಾಡಿದ ಮೇಲೆ ಅಲ್ಲಿಗೆ ಹೋಗಿದ್ದೆವು. ನಾವು ಹೋಗುವುದಕ್ಕಿಂತ ಮುಂಚೆ ರಾಮಲಿಂಗಾರೆಡ್ಡಿ ಅವ್ರು ಹೋಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಅಂತ ಚುನಾವಣಾ ಅಧಿಕಾರಿಗಳು ಘೋಷಣೆಯೇ ಮಾಡಿರಲಿಲ್ಲ. ಆಗ್ಲೇ ಗೆದ್ರು ಅಂತ ಅವರು ಸಂಭ್ರಮ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

ತಪ್ಪಾಗಿರೋ, ಅಸಿಂಧುಗೊಂಡಿರೋ ಮತಗಳನ್ನ ಪರಿಶೀಲನೆ ಆಗಿದೆ. ಆಗ 16 ಮತಗಳ ಅಂತರದ ಮುನ್ನಡೆಯಲ್ಲಿ ನಮ್ಮ ಅಭ್ಯರ್ಥಿ ಇದ್ದರು. ರಾಮಲಿಂಗರೆಡ್ಡಿ, ಅವ್ರ ಮಗ, ಅವ್ರ ಬೆಂಬಲಿಗರು ಫಲಿತಾಂಶ ಘೋಷಣೆ ಮಾಡಬೇಡಿ ಅಂತ ದಬಾಯಿಸಿದರು. ಆದರೆ ನಾವು ಮರು ಮತ ಎಣಿಕೆಯಲ್ಲಿ 16 ಮತಗಳ ಅಂತರದಿಂದ ಗೆದ್ದಿದ್ದೇವೆ. ಆದರೆ ಅನೌನ್ಸ್ ಮಾಡೋಕೆ ಬಿಡ್ತಿಲ್ಲ ಅಂತ ನಮ್ ಅಭ್ಯರ್ಥಿಗಳು ಕರೆ ಮಾಡಿದ್ದರು ಎಂದು ಹೇಳಿದರು.

ಪ್ರತಿಯೊಂದು ಮತಗಳನ್ನು ಪರಿಶೀಲನೆ ಮಾಡಿರುವುದು ವೀಡಿಯೋ ರೆಕಾರ್ಡ್ ಆಗಿದೆ. ಸೋತಿರೋದನ್ನ ನಾವು ಒಪ್ಪಿಕೊಂಡಿದ್ದೇವೆ. ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ. ಬೇರೆ ಬೇರೆ ಕಡೆ ಗೆದ್ದಾಗ, ಚುನಾವಣಾ ಆಯೋಗ ಸರಿಯಿದೆ. ಸೋತಾಗ ಸರಿಯಿಲ್ಲ ಅಂತಾರೆ ಎಂದು ಗುಡುಗಿದರು. ಇದನ್ನೂ ಓದಿ: CBI ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ನೇಮಕ

ನಾನು ಚುನಾವಣಾ ಅಧಿಕಾರಿ ವೀಕ್ಷಕರ ಜೊತೆ ಹೊರಗಡೆ ಹೋಗಿಲ್ಲ. ಸಾರ್ವಜನಿಕವಾಗಿ ತೋರಿಸಲಿ ಹೊರಗಡೆ ಹೋಗಿರೋದನ್ನ ಕಾನೂನು ಹೋರಾಟಕ್ಕೆ ಹೋಗಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಹೈಡ್ರಾಮಾ ಬಳಿಕ ಜಯನಗರದಲ್ಲಿ ಬಿಜೆಪಿ ಗೆಲುವು- ಸೌಮ್ಯಾ ರೆಡ್ಡಿ ಕಣ್ಣೀರು

Share This Article