ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ

Public TV
2 Min Read

ಬೆಳಗಾವಿ: ಸಿದ್ದರಾಮಯ್ಯನವರನ್ನ ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ. ಬೇಕಾದರೆ ಜನರೇ ಸೋಲಿಸಬೇಕು. ನಲವತ್ತು ವರ್ಷಗಳಿಂದ ವರುಣಾ ಸಿದ್ದರಾಮಯ್ಯನವರ ಪರವಾಗಿ ಇರುವಂತಹ ಕ್ಷೇತ್ರವಾಗಿದೆ. ವರುಣಾದಲ್ಲಿ ಸೋಲುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಬೆಳಗಾವಿಯಲ್ಲಿ (Belagavi) ಹೇಳಿದ್ದಾರೆ.

ವರುಣಾದಲ್ಲಿ (Varuna) ಸಿದ್ದರಾಮಯ್ಯ ಸೋಲಿಸಲು ರಾಜಕೀಯ ಪಕ್ಷಗಳು ರಣತಂತ್ರ ರಚಿಸುತ್ತಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರುಣಾಗೆ ನಾನು ಪ್ರಚಾರಕ್ಕೆ ಹೋಗುತ್ತೇನೆ. ಸಿದ್ದರಾಮಯ್ಯನವರು (Siddaramaiah) ಅಲ್ಲಿ ಶ್ರಮ ಪಡುವ ಅವಶ್ಯಕತೆ ಇಲ್ಲ. ಗೆಲುವು ಅವರ ಪರವಾಗಿಯೇ ಇದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಬಿಜೆಪಿ ನನ್ನ ಬಾಡಿಗೆ ಮನೆ, ಸ್ವಂತ ಮನೆಯಾದ ಕಾಂಗ್ರೆಸ್‌ಗೆ ಮರಳುವೆ- ಗೋಪಾಲಕೃಷ್ಣ

ಈಗಾಗಲೇ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಆಗಿದೆ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಅವಕಾಶ ನೀಡುವುದು, ಬಿಡುವುದು ಹೈಕಮಾಂಡ್‍ಗೆ ಬಿಟ್ಟ ನಿರ್ಧಾರ. ಹೈಕಮಾಂಡ್ ಒಪ್ಪಿದರೆ ಎರಡನೇ ಪಟ್ಟಿಯಲ್ಲಿ ಘೋಷಣೆ ಆಗಲಿದೆ. ಬೆಂಗಳೂರಿನಿಂದ ಬಾದಾಮಿಗೆ ಬರಲು ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ವರುಣಾ ಅಥವಾ ಕೋಲಾರ ಕ್ಷೇತ್ರ ಬೆಂಗಳೂರಿನಿಂದ ಹತ್ತಿರವಿದೆ ಇಲ್ಲಿ ಸ್ಪರ್ಧಿಸಿದರೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ 10ಸ್ಥಾನ ಗೆಲ್ಲುತ್ತೇವೆ
ಬೆಳಗಾವಿ ಜಿಲ್ಲೆಯಲ್ಲಿ 10 ಕ್ಕೂ ಅಧಿಕ ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. 12 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ. ಕೆಲವು ಕಡೆ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿಯೇ ಮಾಡುತ್ತಾರೆ. ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಆದರೆ ಇದರಿಂದ ಕಾಂಗ್ರೆಸ್ ಗೆಲುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬಂಡಾಯ ಅಭ್ಯರ್ಥಿಗಳನ್ನು ಸಂಧಾನ ಮಾಡಲು ರಾಜ್ಯಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಯಬಾಗ, ಸವದತ್ತಿ, ಕಿತ್ತೂರು, ಉತ್ತರ ಕ್ಷೇತ್ರಗಳಲ್ಲಿ ಗೊಂದಲವಿದೆ. ಭಾನುವಾರ ಸಂಧಾನ ಸಭೆ ನಡೆಯಲಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಮೂರು ಬಾರಿ ಸರ್ವೇ ಮಾಡಿಸಿದ್ದು ಅದರ ರಿಪೋರ್ಟ್ ಕೂಡ ಅಂತಿಮವಾಗಲಿದೆ. ಸಂಧಾನಕ್ಕೆ ಪ್ರಯತ್ನಿಸುತ್ತೇವೆ ಸಂಧಾನಕ್ಕೆ ಒಪ್ಪದಿದ್ದರೆ ಅಂತಹವರನ್ನು ಕೈಬಿಡಲಾಗುತ್ತದೆ. ಬಿಜೆಪಿ (BJP) ಎಂಎಲ್‍ಸಿ ಕಾಂಗ್ರೆಸ್‍ಗೆ (Congress) ಎಂಬ ಊಹಾಪೋಹ ವಿಚಾರಕ್ಕೆ, ಲಕ್ಷ್ಮಣ ಸವದಿಯವರು ಜಿಲ್ಲಾ ಅಥವಾ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಲ್ಲಿಯೂ ಈ ಬಗ್ಗೆ ಹೇಳಿಲ್ಲ. ನಮ್ಮಲ್ಲಿ ಹತ್ತು ಜನ ಆಕಾಂಕ್ಷಿಗಳು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಬಿಟ್ಟ ಕಾರ್ಯಕರ್ತನಿಗೆ ನಯವಾದ ಬೆದರಿಕೆ ಹಾಕಿ ಮನವೊಲಿಸಿದ ಶಿವನಗೌಡ ನಾಯ್ಕ್

Share This Article