ಬೆಳಗಾವಿ: ಚುನಾವಣೆ ಹೊಸ್ತಿಲಲ್ಲಿ ನನ್ನನ್ನು ಸೇರಿಸಿ 50 ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ (Lokayukta) ಹಾಗೂ ಐಟಿ (IT) ದಾಳಿಯ ಸಂಚು ರೂಪಿಸಲಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಆರೋಪಿಸಿದ್ದಾರೆ.
ಬೆಳಗಾವಿಯ (Belagavi) ಕುವೆಂಪು ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ 10 ದಿನ ಉಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವುದು ಜನರ ಭಾವನೆಯಿಂದ ಗೊತ್ತಾಗುತ್ತಿದೆ. ರಾಜ್ಯದ ಜನರು ಕಾಂಗ್ರೆಸ್ ಸರ್ಕಾರ ತರಲು ಬಯಸಿದ್ದಾರೆ ಎನಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪರ ಒಳ್ಳೆಯ ವಾತಾವರಣ ಇದೆ. ಬೆಲೆ ಏರಿಕೆಯಿಂದ ತತ್ತರಿಸಿದ ಸಂದರ್ಭದಲ್ಲಿ ಜನರಲ್ಲಿ ನವಚೈತನ್ಯ ತರಬೇಕೆಂದು ಕಾಂಗ್ರೆಸ್ನ ಗ್ಯಾರಂಟಿ ಸ್ಕೀಮ್ ಇದೆ. ಇವು ಜನಪ್ರಿಯ ಯೋಜನೆಗಳು ಆಗುವ ಎಲ್ಲಾ ಲಕ್ಷಣಗಳಿವೆ ಎಂದು ತಿಳಿಸಿದರು.
ಆದರೆ ಬಿಜೆಪಿಯವರು ಹತಾಶರಾಗಿ ಕರ್ನಾಟಕದಲ್ಲಿ ವಾಮಮಾರ್ಗ ಹಿಡಿಯುವ ಸುದ್ದಿ ತಲುಪಿದೆ. 50 ಅಭ್ಯರ್ಥಿಗಳು, ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ ದಾಳಿ ನಡೆಸುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಮಾಡುವ ಮುನ್ಸೂಚನೆ ಸಿಕ್ಕಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಈ ರೀತಿ ವಿಪಕ್ಷಗಳನ್ನು ಹೆದರಿಸುವುದು ಸರ್ವೇಸಾಮಾನ್ಯವಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸ್ಪಷ್ಟವಾಗಿ ಕನ್ನಡ ಮಾತಾಡಿ ಬೇಷ್ ಎನಿಸಿಕೊಂಡ ಯೋಗಿ ಆದಿತ್ಯನಾಥ್
ಬಿಜೆಪಿಯವರು ಏನು ಮಾಡುತ್ತಿದ್ದಾರೆ ಇದೇ ಅವರಿಗೆ ತಿರುಗು ಬಾಣ ಆಗಲಿದೆ. ಸಮಯ ಕಡಿಮೆ ಇದೆ, ಇಂತಹ ಸಂದರ್ಭದಲ್ಲಿ ಅವರು ಇದನ್ನು ಬಿಡಬೇಕು. ರಾಜ್ಯದ ಜನರು ಇವೆಲ್ಲವನ್ನು ಗಮನಿಸುತ್ತಿದ್ದಾರೆ. ನಾನು ರಾಜ್ಯ ಕಾಂಗ್ರೆಸ್ ವಕ್ತಾರೆ, ರಾಜ್ಯ ಕಾಂಗ್ರೆಸ್ ಸೂಚನೆ ಮೇರೆಗೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ. ಗೆಲ್ಲುವುದನ್ನು ತಡೆಯುವುದು ಯಾರ ಕೈಯಲ್ಲೂ ಇಲ್ಲ. ಅದು ಮತದಾರರ ಕೈಯಲ್ಲಿ ಇದೆ ಎಂದರು.
ನಮ್ಮ ಜಿಲ್ಲೆಯಲ್ಲಿಯೂ ಮೂವರು ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿದ್ದಾರೆ. 50 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷದವರಿದ್ದಾರೆ. ಯಾರ ಮೇಲೆ ಪ್ರೀತಿ ಜಾಸ್ತಿ ಇದೆ ಅಂತಹವರು 3 ಜನ ಇದ್ದಾರೆ. ಜನರ ಭಾವನೆಯನ್ನು ಕಲುಕುವುದು, ಈ ರೀತಿ ವಾತಾವರಣ ಸೃಷ್ಟಿ ಮಾಡುವುದು, ಬೇರೆ ಎಲ್ಲಾ ಅಸ್ತ್ರಗಳನ್ನು ಈಗ ಅವರು ಬಳಸಿದ್ದಾರೆ. ಈ ಮೊದಲೂ ನಮ್ಮ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುದ್ದಿಗೋಷ್ಠಿ ನಡೆಸಿದರು. ಒಂದು ವಾರದ ಹಿಂದೆ ಸುದ್ದಿಗೋಷ್ಠಿ ನಡೆಸಿ ಸಾವಿರ ಜನ ಐಟಿ ಅಧಿಕಾರಿಗಳು ಬಂದಿದ್ದನ್ನು ಹೇಳಿದ್ದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಇದನ್ನೂ ಓದಿ: ಮೋದಿ ಸಿದ್ಧರಿದ್ರೆ ಅವರೊಂದಿಗೆ ಓಟದ ಸ್ಪರ್ಧೆಗೆ ನಾನು ರೆಡಿ: ಸಿದ್ದರಾಮಯ್ಯ