ಹುಕ್ಕೇರಿ ಕ್ಷೇತ್ರದಲ್ಲಿ ನಿರ್ಣಯವಾಗದ ಉಮೇಶ್ ಕತ್ತಿ ಉತ್ತರಾಧಿಕಾರಿ: ಕುಟುಂಬದಲ್ಲಿ ಬಿರುಕಿಲ್ಲ ಎಂದು ಕಣ್ಣೀರಿಟ್ಟ ಕತ್ತಿ ಪುತ್ರ

Public TV
1 Min Read

ಚಿಕ್ಕೋಡಿ: ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ಹುಕ್ಕೇರಿ ಮತಕ್ಷೇತ್ರದ ದಿ.ಉಮೇಶ್ ಕತ್ತಿ (Umesh Katti) ಅವರ ಉತ್ತರಾಧಿಕಾರಿ ಯಾರು ಎನ್ನುವ ಬಹು ದೊಡ್ಡ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ. ಅಲ್ಲದೇ ಕ್ಷೇತ್ರದ ಜನರ ಜೊತೆಗೆ ಬಿಜೆಪಿ ವರಿಷ್ಠರಿಗೂ ಹುಕ್ಕೇರಿಯಲ್ಲಿ (Hukkeri) ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿದೆ.

ಕೆಲ ತಿಂಗಳುಗಳ ಹಿಂದೆ ನಿಧನರಾದ ಸಚಿವ ಉಮೇಶ್ ಕತ್ತಿ ನಂತರ ಹುಕ್ಕೇರಿ ಕ್ಷೇತ್ರ ಯಾರಿಗೆ ಎನ್ನುವ ಕುತೂಹಲ ಜನರಲ್ಲಿದೆ. ಒಂದು ಕಡೆ ಕತ್ತಿ ಸಹೋದರ ರಮೇಶ್ ಕತ್ತಿ (Ramesh Katti) ರೇಸ್‍ನಲ್ಲಿದ್ದರೆ ಮತ್ತೊಂದೆಡೆ ಕತ್ತಿಯವರ ಪುತ್ರ ನಿಖೀಲ್ ಕತ್ತಿ (Nikhil Katti) ಸಹ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಇಬ್ಬರೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕಾರಣ ಸಹಜವಾಗಿ ಬಿಜೆಪಿ ವರಿಷ್ಠರಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಗೊಂದಲ ನಿರ್ಮಾಣವಾಗಿದೆ. ಇದನ್ನೂ ಓದಿ: ಟಿಕೆಟ್ ಹಂಚಿಕೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಹೇಶ ಕುಮಟಳ್ಳಿ

ಇದರ ಮಧ್ಯೆ ಕತ್ತಿ ಮನೆತನದಲ್ಲಿ ಟಿಕೆಟ್‍ಗಾಗಿ ಒಡಕು ಏರ್ಪಟ್ಟಿದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಯಾವುದೇ ಒಡಕು ಕುಟುಂಬದಲ್ಲಿ ಇಲ್ಲ ಎನ್ನುವ ಸಂದೇಶ ಸಾರುವ ಕಾರ್ಯವನ್ನು ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮಾಡುತ್ತಿದ್ದಾರೆ.

ಟಿಕೆಟ್‍ಗಾಗಿ ಚಿಕ್ಕಪ್ಪ ಹಾಗೂ ಪುತ್ರನ ನಡುವೆ ಫೈಟ್ ನಡೆದಿದೆ ಎನ್ನುವ ಸುದ್ದಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿರುವುದಕ್ಕೆ ಉಮೇಶ್ ಕತ್ತಿ ಪುತ್ರ ಕೂಡ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯಿಂದ (BJP) ಯಾರಿಗೆ ಟಿಕೆಟ್ ನೀಡಿದರೂ ಕತ್ತಿ ಮನೆತನ ಅವರ ಪರ ಕೆಲಸ ಮಾಡುತ್ತದೆ. ನಮ್ಮ ಮನೆಯಲ್ಲಿ ಯಾವುದೇ ಬಿರುಕು ಇಲ್ಲ ಎಂದು ನಿಖಿಲ್ ಕತ್ತಿ ಕಣ್ಣೀರು ಹಾಕಿದ್ದಾರೆ.

ಕ್ಷೇತ್ರದಲ್ಲಿ ಇದುವರೆಗೂ ಯಾರು ಅಭ್ಯರ್ಥಿ ಎನ್ನುವ ನಿರ್ಣಯವಾಗದ ಕಾರಣ ಕತ್ತಿ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದನ್ನೂ ಓದಿ: ಕೈ ನಾಯಕರು ಕುಡಿದು ಪಂಚಮಸಾಲಿ ಶ್ರೀಗಳಿಗೆ ಕರೆ ಮಾಡಿ ಕಿರುಕುಳ- ಸಿ.ಸಿ. ಪಾಟೀಲ್ ಗಂಭೀರ ಆರೋಪ

Share This Article