‘ಹೊಳೆ’ಯನ್ನು ಈಜಿ ‘ನರಸೀಪುರ’ ದಡ ಸೇರುವವರ‍್ಯಾರು?

Public TV
2 Min Read

ಹಾಸನ: ಹೇಮಾವತಿ ನದಿಯ ದಂಡೆಯಲ್ಲಿರುವ ಕ್ಷೇತ್ರ ಹೊಳೆನರಸೀಪುರ (Holenarasipura). ಈ ಕ್ಷೇತ್ರದ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ದೊಡ್ಡ ಗೌಡರ ಕುಟುಂಬ ಹಾಗೂ ಹೆಚ್‌.ಡಿ.ರೇವಣ್ಣ (H.D.Revanna). ಈ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣವೇ ಮುಖ್ಯ ವಿಷಯ ಆಗಿದೆ. 2023ರ ವಿಧಾನಸಭಾ ಚುನಾವಣೆಗೆ ರಣಕಣ ಸಿದ್ಧವಾಗಿದ್ದು, ಹೊಳೆನರಸೀಪುರ ಕ್ಷೇತ್ರದ ಚುನಾವಣೆಯೂ ಕುತೂಹಲ ಮೂಡಿಸಿದೆ.

ಕಣದಲ್ಲಿ ಯಾರಿದ್ದಾರೆ?
ದೇವೇಗೌಡರ ಪ್ರಾಬಲ್ಯವಿರುವ ಇಲ್ಲಿ 9 ಬಾರಿ ಜೆಡಿಎಸ್ ಗೆದ್ದಿದೆ (ಹಿಂದಿನ ಜನತಾ ಪಕ್ಷ ಸೇರಿ) ನಾಲ್ಕು ಬಾರಿ ಕಾಂಗ್ರೆಸ್, ಮೂರು ಬಾರಿ ಪಕ್ಷೇತರರು ಗೆದ್ದಿದ್ದಾರೆ. ಸತತ ಗೆಲುವಿನೊಂದಿಗೆ ಕ್ಷೇತ್ರವನ್ನು ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಹೆಚ್‌.ಡಿ.ರೇವಣ್ಣ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ಈ ಬಾರಿ ಶ್ರೇಯಸ್‌ ಪಟೇಲ್‌ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ದೇವರಾಜೇಗೌಡ ಅಖಾಡದಲ್ಲಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್

ಅಭ್ಯರ್ಥಿಗಳ ಪ್ಲಸ್‌, ಮೈನಸ್?
ಹೆಚ್.ಡಿ.ರೇವಣ್ಣ: ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಮಾಡಿದ್ದಾರೆ ಎಂಬ ವಿಷಯದ ಜೊತೆಗೆ ಬಿಗಿ ಹಿಡಿತ ರೇವಣ್ಣ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಪಾಯಿಂಟ್‌ ಅಂದ್ರೆ, ಕೆಲವರಷ್ಟನ್ನೇ ಹೊರತುಪಡಿಸಿ ಎಲ್ಲರನ್ನೂ ಸಮಾನವಾಗಿ ಕಾಣುವುದಿಲ್ಲ ಅನ್ನೋದು.

ಶ್ರೇಯಸ್ ಪಟೇಲ್ ಮಾಜಿ ಪ್ರಧಾನಿ ದೇವೇಗೌಡರ ಕಟು ರಾಜಕೀಯ ವೈರಿ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಎಂಬ ಹೆಸರು ಇವರಿಗಿದೆ. ತಾಯಿ ಅನುಪಮಾ ಎರಡು ಬಾರಿ ಸೋತಿದ್ದರು. ಯುವ ಮುಖ ಮತ್ತು ಎಲ್ಲರೊಂದಿಗೂ ಬೆರೆಯವ ಗುಣ ಇರುವುದು ಶ್ರೇಯಸ್‌ಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್ ಏನೆಂದರೆ, ಸಂಘಟನೆ ಕೊರತೆ, ಆರ್ಥಿಕ ಸಂಪನ್ಮೂಲ, ದೇವೇಗೌಡರ ಕುಟುಂಬ ರಾಜಕಾರಣ ಅಸ್ತ್ರವೊಂದನ್ನೇ ಮುಂದಿಟ್ಟು ಚುನಾವಣೆಗೆ ಹೋಗುತ್ತಿರುವುದಾಗಿದೆ. ಇದನ್ನೂ ಓದಿ: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ: ಸಿದ್ದರಾಮಯ್ಯ

ದೇವರಾಜೇಗೌಡ: ವಕೀಲರು, ಸಂಸದ ಪ್ರಜ್ವಲ್ ರೇವಣ್ಣ ಅವರ ಸುಳ್ಳು ಅಫಿಡವಿಟ್ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಪಾಯಿಂಟ್‌ ಹೇಳೋದಾದರೆ, ಕ್ಷೇತ್ರದವರೇ ಆದರೂ ಹೊಸ ಮುಖ. ಸಂಘಟನೆ ಕೊರತೆ, ಮಾತಿನ ಮೇಲೆ ಹಿಡಿತ ಇಲ್ಲದೇ ಇರುವುದು.

ಜಾತಿ ಲೆಕ್ಕಾಚಾರ ಏನು?
ಈ ಕೇತ್ರದಲ್ಲಿ 93 ಸಾವಿರ ಮತದಾರರಿರುವ ಒಕ್ಕಲಿಗರೇ ನಿರ್ಣಾಯಕ ಆಗಲಿದ್ದಾರೆ. ಉಳಿದಂತೆ ಪರಿಶಿಷ್ಟ ಜಾತಿ 24 ಸಾವಿರ, ಕುರುಬ 21 ಸಾವಿರ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ 13 ಸಾವಿರ ಹೊರತು ಪಡಿಸಿ, ಉಳಿದ ಸಮುದಾಯಗಳ ಮತದಾರರು 10 ಸಾವಿರದಿಂದ 1 ಸಾವಿರ ಒಳಗಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 1,10,945 ಪುರುಷರು, 1,08,045 ಮಹಿಳೆಯರು ಹಾಗೂ ಇತರೆ 8 ಸೇರಿ ಒಟ್ಟು 2,18,969 ಮತದಾರರಿದ್ದಾರೆ. ಇದನ್ನೂ ಓದಿ: ಪ್ರೀತಂ ಗೌಡ ಹೇಳಿಕೆ ಖಂಡನೀಯ – ಸ್ವಪಕ್ಷದ ಶಾಸಕನ ವಿರುದ್ಧ ಅಶ್ವಥ್‌ ನಾರಾಯಣ್‌ ಗರಂ

Share This Article