ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್‌ ಬೇಡ – ಬೆಂಗಳೂರಿನಲ್ಲಿ ಗೆಲ್ಲೋ ಕ್ಷೇತ್ರಗಳ ಟಾರ್ಗೆಟ್‍ಗೆ ಶಾ ಸೂತ್ರ

Public TV
2 Min Read

ಬೆಂಗಳೂರು: ಚುನಾವಣೆಯಲ್ಲಿ ಬೆಂಗಳೂರನ್ನು (Bengaluru) ಗೆಲ್ಲಲು ಅಮಿತ್ ಶಾ (Amit Shah) ಬಿಜೆಪಿ ನಾಯಕರಿಗೆ ಬಿಗ್‌ ಟಾಸ್ಕ್‌ ನೀಡಿದ್ದಾರೆ.

ಚುನಾವಣೆ (Election) ಸನಿಹ ಬರುತ್ತಿದ್ದಂತೆ ಬಿಜೆಪಿ (BJP) ಫುಲ್ ಅಲರ್ಟ್ ಆಗಿದ್ದು, ಭಾನುವಾರ ರಾತ್ರಿ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿಯಿಂದ ರಾಜ್ಯ ಘಟಕಕ್ಕೆ ಸಂಭಾವ್ಯರ ಪಟ್ಟಿ ಬಗ್ಗೆ ರಾಜ್ಯಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ನೀಡಿದರು. ಈ ವೇಳೆ ಅಮಿತ್ ಶಾ ಕ್ಷೇತ್ರವಾರು ಆಕಾಂಕ್ಷಿಗಳ ಪಟ್ಟಿ ಪಡೆದು ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ 32 ಕ್ಷೇತ್ರಗಳ ಮೇಲೆ ಫೋಕಸ್ ಮಾಡುವಂತೆ ಸೂಚಿಸಿದ್ದಾರೆ.

ಮೋದಿ ರೋಡ್ ಶೋ, ರ‍್ಯಾಲಿಗಳ ಸ್ಥಳಗಳ ಬಗ್ಗೆ ಪ್ಲಾನಿಂಗ್, ಮೀಸಲಾತಿ ಎಫೆಕ್ಟ್ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು. ಇದೇ ವೇಳೆ ಕಾಂಗ್ರೆಸ್‍ (Congress) ಅಭ್ಯರ್ಥಿಗಳ ಕುರಿತು ಮಹತ್ವದ ಚರ್ಚೆ ಮಾಡಿದರು. ಟಿಕೆಟ್ ಫೈಟ್ ಬಿಟ್ಟು ಒಟ್ಟಾಗಿ ಕೆಲಸ ಮಾಡಬೇಕು. ಅಭ್ಯರ್ಥಿ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ ಎಂದು ಸೂಚನೆ ನೀಡಿದರು.

ಸಭೆಯ ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ, ಪ್ರಚಾರ ಸಮಿತಿಗಳ ಚರ್ಚೆ ಆಗಿದೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ ಎಂದರು. ಇದನ್ನೂ ಓದಿ: ಹಾಸನದಲ್ಲಿ ಮತ್ತೆ ಸ್ವರೂಪ್ Vs ಭವಾನಿ ಫೈಟ್- ಇಬ್ಬರಿಂದಲೂ ವರಿಷ್ಠರಿಗೆ ಡೆಡ್‍ಲೈನ್ ಡಿಮ್ಯಾಂಡ್

ಅಮಿತ್ ಶಾ ನೀಡಿದ ಸೂಚನೆಗಳೇನು?
ಕೆಲವು ಜಿಲ್ಲೆಗಳಲ್ಲಿ ನಾಯಕರ ಒಗ್ಗಟ್ಟು ಇಲ್ಲ. ಇದು ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ನಾವು ತೀರ್ಮಾನ ಮಾಡುತ್ತೇವೆ. ಪಕ್ಷದ ಸೂಚನೆ ಪಾಲಿಸಿ, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಉತ್ತರಾಖಂಡ್, ಉತ್ತರಪ್ರದೇಶ, ಗೋವಾದಲ್ಲಿ ವ್ಯತಿರಿಕ್ತ ಅಂಶಗಳಿದ್ದರೂ ಗೆದ್ದಿದ್ದೇವೆ. ಕರ್ನಾಟಕದಲ್ಲಿ ಮೋದಿ ಅಲೆ ಚೆನ್ನಾಗಿದ್ದು, ಗೊಂದಲವಿಲ್ಲದ ವ್ಯವಸ್ಥಿತ, ತಂಡ ಸ್ಪೂರ್ತಿಯ ಕೆಲಸ ಮಾಡಿದರೆ ಗೆಲುವು ಖಂಡಿತ ನಮಗೆ ಸಿಗಲಿದೆ.

ಕೆಲವರು ಹೊಂದಾಣಿಗೆ ರಾಜಕಾರಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಚುನಾವಣೆಯಿಂದಲೇ ಹೊಂದಾಣಿಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಿ.  ಗ್ರೇಟರ್ ಬೆಂಗಳೂರಿನಲ್ಲಿ 2018ರ ಚುನಾವಣೆಯಲ್ಲಿ ಕೇವಲ 11 ಕ್ಷೇತ್ರ ಮಾತ್ರ ಗೆದ್ದಿದ್ದೇವೆ. ಈ ಚುನಾವಣೆಯಲ್ಲಿ 20+ ಕ್ಷೇತ್ರಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಠಿಣ ಕೆಲಸ ಮಾಡಿ ಎಂದು ಅಮಿತ್‌ ಶಾ ಖಡಕ್‌ ಸೂಚನೆ ನೀಡಿದ್ದಾರೆ.

ಬೆಂಗಳೂರು ಯಾಕೆ?
ಬೆಂಗಳೂರು ನಗರದಲ್ಲಿ ಒಟ್ಟು 32 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ 4, ಕಾಂಗ್ರೆಸ್‌ 17, ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಅಮಿತ್‌ ಶಾ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಟಾಸ್ಕ್‌ ನೀಡಿದ್ದರೆ.

ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ಬೆಂಗಳೂರು ಗ್ರಾಮಾಂತರ ಒಂದೇ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಂಡಿತ್ತು. 150+ ಟಾರ್ಗೆಟ್‌ ರೀಚ್‌ ಆಗಬೇಕಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯ. ಈ ಕಾರಣಕ್ಕೆ ಬಿಜೆಪಿ 20+ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *