ಕೈ, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತಿದ್ದು ನಾವು ಏನು ಮಾಡೋಣ: ಪ್ರಕಾಶ್ ರೈ ಪ್ರಶ್ನೆ

Public TV
2 Min Read

ಬೆಂಗಳೂರು:ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷದ ವಿರುದ್ಧ ಕೋಮುವಾದಿ ಪಕ್ಷ ಎಂದು ಆರೋಪಿಸಿ ಪ್ರಚಾರ ನಡೆಸಿದ್ದ ಬಹು ಭಾಷಾ ನಟ ಪ್ರಕಾಶ್ ರೈ, ಇಂದಿನ ರಾಜಕೀಯ ನೇತರಾರರ ನಡೆ ಕಂಡು ಏನು ಮಾಡೋಣ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಪ್ರಕಾಶ್ ರೈ, ನಮ್ಮ ಕ್ಷೇತ್ರದ ಪ್ರತಿನಿಧಿಗಳ ಮೇಲೆ ನಾವಿಟ್ಟ ನಂಬಿಕೆಯನ್ನು, ಇವರು ಇನ್ಯಾರಿಗೋ ಮಾರಿಕೊಳ್ಳುವುದನ್ನು ಬೇರೆ ದಾರಿಯಿಲ್ಲದೇ ಈ ರಾಜಕಾರಣಿಗಳ ಆಟವನ್ನು ನಾವು ಒಪ್ಪಿಕೊಳ್ಳವಂತೆ ಮಾಡಿದೆ. ಸದ್ಯ ನಮ್ಮ ಮೇಲೆ ಅಭಿಪ್ರಾಯ ಹೇರುವುದು ನಾವು ಪ್ರಶ್ನಿಸದಿದ್ದರೆ, ನಮ್ಮ ಈ ಅಸಹಾಯಕತೆಗೆ ಹಾಗೂ ಅಮಾಯಕತೆಯ ದುರುಪಯೋಗಕ್ಕೆ ಯಾರು ಕಾರಣವೆಂದು ನಾವು ಬೇಗ ಗೊತ್ತು ಮಾಡಿಕೊಳ್ಳದಿದ್ದರೆ ಮತ್ತೊಮ್ಮೆ ಸೋಲುವುದು ನಾವೇ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಸಂವಿಧಾನಿಕ ಸರ್ಕಾರದ ರಚನೆಯ ಕಸರತ್ತು ಆರಂಭವಾಗಿದೆ. ಪ್ರಜೆಗಳಿಗೆ ಈ ಕುರಿತು ಸುದ್ದಿ ನೀಡಬೇಕಾಗುವುದರ ಬದಲು ಯಾರು, ಯಾವ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಪಡೆಯುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

ಯಾರಿಗೂ ಬಹುಮತ ಬರದ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಬ್ಬರನ್ನೊಬ್ಬರು ಕೊಳ್ಳುವ ಮಾರುವ ವ್ಯಾಪಾರಕ್ಕಿಳಿಯುತ್ತಾರೆ. ನಮ್ಮ ಅನುಮತಿಯಿಲ್ಲದೆ, ತಮ್ಮ ಶಕ್ತ್ಯಾನುಸಾರ ದಕ್ಕಿದ್ದನ್ನು ಹಂಚಿಕೊಂಡು, ಭಿನ್ನಾಭಿಪ್ರಾಯ ಮರೆತು, ವಿಧಾನಸೌಧದೊಳಗೆ ಒಂದಾಗಿ ಓಡಾಡುತ್ತ ಮುಂದಿನ ಚುನಾವಣೆಯವರೆಗೆ ಆರಾಮಾಗಿರುತ್ತಾರೆ ಎಂದು ಟೀಕೆ ಮಾಡಿದ್ದಾರೆ.

ರಾಜ್ಯ ರಾಜಕಾರಣದ ಕುರಿತು ನಿರಂತರವಾಗಿ ಟೀಕೆ ಮಾಡುತ್ತಿರುವ ಪ್ರಕಾಶ್ ರೈ, ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ನಡೆಗಳ ಕುರಿತು ಹ್ಯಾಪಿ ವಿವೀಂಗ್ ಎಂಬ ಹೆಸರಿನೊಂದಿಗೆ ವ್ಯಂಗ್ಯವಾಡಿ ಟೀಕೆ ಮಾಡುತ್ತಿದ್ದಾರೆ.

ಚುನಾವಣೆಗೂ ಮೊದಲು ಬಿಜೆಪಿ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿ ಬಿಜೆಪಿಗೆ ಮತ ನೀಡದಂತೆ ಪ್ರಕಾಶ್ ರೈ ಮನವಿ ಮಾಡಿದ್ದರು. ತಾವು ಯಾವುದೇ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ ಆದರೆ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದ್ದರು. ಈ ವೇಳೆ ಮುಂದಿನ ಸರ್ಕಾರದ ರಚನೆ ಬಳಿಕವೂ ತಾವು ವಿರೋಧಿ ಸ್ಥಾನದಲ್ಲಿ ನಿಂತು ಜನರಿಗೆ ಪ್ರಶ್ನೆ ಕೇಳಲು ಪ್ರೇರಣೆ ನೀಡುವುದಾಗಿ ಹಾಗೂ ನಿರಂತರ ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *