ಮಡಿಕೇರಿ: ಹಾಡಿಯಲ್ಲಿ ವಾಸ್ತವ್ಯ ಮಾಡಿ, ಹಾಡಿ ಜನರ ಸಮಸ್ಯೆ ಆಲಿಸುವ ಮೂಲಕ ಜೆಡಿಎಸ್ ಸ್ಟಾರ್ ಪ್ರಚಾರಕಿ ಪೂಜಾ ಗಾಂಧಿ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದರು.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆಸುವಿನಕೆರೆ ಹಾಡಿಗೆ ಭೇಟಿ ನೀಡಿದ ಮುಂಗಾರು ಮಳೆ ಬೆಡಗಿ, ಹಾಡಿ ಜನರ ಸಮಸ್ಯೆ ಆಲಿಸಿ ಕೆಲಕ್ಷಣ ಗದ್ಗದಿತರಾದ್ರು. ಅವರ ಕಷ್ಟಗಳನ್ನು ಕೇಳಿ ಮರುಗಿದ ಪೂಜಾಗಾಂಧಿ ಸಮಸ್ಯೆ ಬಗೆಹರಿಸಿ ಹಾಡಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಬಾರಿ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದ್ದು, ಇಂತಹ ಜನರ ಬದುಕಿಗೆ ಬೆಳಕಾಗುವ ಕಾರ್ಯ ಮಾಡುತ್ತೇನೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಕಷ್ಟಸಾಧ್ಯ. ಏನು ಮಾಡ್ಬೇಕು ಅಂದ್ರೂ ರಾಷ್ಟ್ರೀಯ ಪಕ್ಷಗಳ ನಾಯಕರುಗಳಿಗೆ ದೆಹಲಿಯಿಂದ ಅನುಮತಿ ಬೇಕು. ಅದೇ ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷಕ್ಕೆ ಅದ್ರ ಅಗತ್ಯವಿಲ್ಲ. ಜನರ ಸಮಸ್ಯೆ ನೂರಿದ್ದು, ಅವುಗಳನ್ನು ಬಗೆಹರಿಸಲು ಕುಮಾರಸ್ವಾಮಿ ಗೆದ್ದು ಬರುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೆಡಿಎಸ್ ಪರ ಪ್ರಚಾರವನ್ನು ನಡೆಸಿದ್ದು, ಜೆಡಿಎಸ್ ನತ್ತ ಜನರ ಒಲವು ಇದೆ ಎಂದು ಪೂಜಾ ಗಾಂಧಿ ಹೇಳಿದ್ರು.
ವಿರಾಜಪೇಟೆ ಪಟ್ಟಣದ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಪೂಜಾ ಗಾಂಧಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋಕೆ ಜನ ಮುಗಿಬಿದ್ದರು. ಜೆಡಿಎಸ್ಗೆ ಒಂದು ಚಾನ್ಸ್ ಕೊಟ್ಟು ನೋಡಿ ಎಂದು ಪ್ರಚಾರ ನಡೆಸ್ತಿರೋ ಮುಂಗಾರು ಮಳೆ ಹುಡುಗಿ ಸೆಲ್ಫಿ ಕೊಟ್ಟು ಓಟು ಕೇಳಿದ್ರು. ರಸ್ತೆಯಲ್ಲಿ ತೆರಳ್ತಿದ್ದ ವಾಹನಗಳನ್ನು ತಡೆದು ಜೆಡಿಎಸ್ ಗೆ ಓಟು ಮಾಡಿ ಎಂದು ಪೂಜಾ ಗಾಂಧಿ ಮನವಿ ಮಾಡಿದ್ರು.
ಹಾಡಿ ಜನರು ತಯಾರಿಸಿದ ಅಕ್ಕಿರೊಟ್ಟಿ, ಸೊಪ್ಪಿನ ಪಲ್ಯ, ಅನ್ನ, ತರಕಾರಿ ಸಾಂಬಾರು ಸವಿದು ಅಲ್ಲೇ ರಾತ್ರಿ ಕಳೆದ್ರು. ಬೆಳಗ್ಗಿನಿಂದಲೇ ವಿರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿದ ಪೂಜಾ ರಾತ್ರಿ ಕೂಡಾ ಜನರ ಸಮಸ್ಯೆ ಆಲಿಸಿ ಅವರೊಂದಿಗೆ ಬೆರೆತು ಹಾಡಿ ವಾಸ್ತವ್ಯ ಮಾಡುವ ಮೂಲಕ ಮತಯಾಚನೆ ಮಾಡಿ ಗಮನ ಸೆಳೆದ್ರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಉಪಸ್ಥಿತರಿದ್ದರು.