ರೆಬಲ್ ಶಾಸಕರಿಗೆ ಕರುಣೆ ಬಂದು ದೋಸ್ತಿ ಸರ್ಕಾರ ಉಳಿಸಿಕೊಳ್ತಾರೆ: ಡಿಕೆಶಿ

Public TV
1 Min Read

ಬೆಂಗಳೂರು: ಅತೃಪ್ತ ಶಾಸಕರಿಗೆ ಕರುಣೆ ಬಂದು ದೋಸ್ತಿ ಸರ್ಕಾರ ಉಳಿಸಿಕೊಳ್ಳುತ್ತಾರೆ. ವಿಶ್ವಾಸಮತ ಸಂದರ್ಭದಲ್ಲಿ ನಮ್ಮ ಪರವಾಗಿ ಮತ ಹಾಕುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಕೆ ಗೆಸ್ಟ್ ಬಳಿ ಮಾತನಾಡಿದ ಸಚಿವರು, ನಾವು ಶಾಂತಿಪ್ರಿಯರು ಅಂತ ಬಿಜೆಪಿಯವರು ಇಂತಹ ಕೆಲಸ ಮಾಡಿದ್ದಾರೆ. ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಈಗಾಗಲೇ ಕಾರ್ಯಕರ್ತರು, ಜನರು ಶಾಸಕರಿಗೆ ರಾಜೀನಾಮೆ ನೀಡದಂತೆ ಮನವಿ ಮಾಡುತ್ತಿದ್ದಾರೆ. ಶಾಸಕರು ರಾಜೀನಾಮೆ ವಾಪಸ್ ಪಡೆದು ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಚಿವ ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹೋಗುವಾಗ ಬಿಜೆಪಿ ಮುಖಂಡ ಆರ್.ಅಶೋಕ್ ಉಪಸ್ಥಿತರಿದ್ದ ವಿಚಾರವಾಗಿ ವಾಗ್ದಾಳಿ ನಡೆಸಿದ ಸಚಿವರು, ರೆಬಲ್ ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ, ಇದು ಅವರ ಪಕ್ಷದ ಆಂತರಿಕ ವಿಚಾರ ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಹೋಟೆಲ್, ಬಾಂಬೆ, ಫ್ಲೈಟ್, ದೆಹಲಿ, ವಿಶೇಷ ವಿಮಾನ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಿಕೊಟ್ಟಿದ್ದು ಬಿಜೆಪಿಯವರೇ ಎಂದು ದೂರಿದರು.

ಮಾನ ಮರ್ಯಾದೆ ಇದ್ದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಬೇಕು. ಈ ಆಪರೇಷನ್ ನಮ್ಮದೆ, ನಮಗೆ ಮುಖ್ಯಮಂತ್ರಿ ಚೇರ್ ಬೇಕು ಅಂತ ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *