ಕರ್ನಾಟಕಕ್ಕೆ ಕಲ್ಲಿದ್ದಲು ಪೂರೈಸಿ: ಪ್ರಧಾನಿಗೆ ಎಚ್‍ಡಿಕೆ ಮನವಿ

Public TV
1 Min Read

ನವದೆಹಲಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಶಾಖೋತ್ಪನ್ನ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಕಲ್ಲಿದ್ದಲು ಪೂರೈಸುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಡಿನ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸರ್ಕಾರದ ಸಹಕಾರ ಕೇಳಿದ್ದೇನೆ. ಶಾಖೋತ್ಪನ್ನ ಘಟಕದಲ್ಲಿ ಎರಡು ದಿನಕ್ಕೆ ಆಗುವಷ್ಟು ಸ್ಟಾಕ್ ಇದೆ. ಹೀಗಾಗಿ ಕಲ್ಲಿದ್ದಲು ಪೂರೈಕೆಗಾಗಿ ಮನವಿ ಮಾಡಿದ್ದೇನೆ ಎಂದರು.

ರಾಜಕೀಯದ ಅನುಭವದ ಹಿನ್ನೆಲೆಯಲ್ಲಿ ಮೋದಿಯವರು ಸಲಹೆ ನೀಡಿದ್ದಾರೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದು ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

 

ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಯುಟರ್ನ್ ಇಲ್ಲ. ಮಾಧ್ಯಮಗಳು ಹಾಗೇ ಬಿಂಬಿಸಿಸುತ್ತಿವೆ. ಸಾಲಮನ್ನಾಕ್ಕೆ ಕಾಂಗ್ರೆಸ್ ಬೆಂಬಲ ಬೇಕು. ಮೈತ್ರಿ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರು ಬೆಂಬಲ ಅವಶ್ಯಕವಾಗಿದ್ದು, ರೈತರ ಸಾಲಮನ್ನಾ ಮಾಡುತ್ತೇನೆ ಎಂದರು.

ಚುನಾವಣಾ ಪ್ರಚಾರದ ವೇಳೆ 24 ಗಂಟೆಯ ಒಳಗಡೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ನನಗೆ ನನ್ನದೆಯಾದ ಇತಿಮಿತಿ ಇದೆ. ಕೊಂಚ ಉಸಿರಾಟಕ್ಕೆ ಸಮಯಬೇಕು. ಬುಧವಾರ ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಮಾಡುತ್ತೇವೆ. ನಾನು ಸುಮ್ಮನೆ ಕುಳಿತುಕೊಂಡಿಲ್ಲ. ಸಾಲಮನ್ನಾಗೆ ಸಂಬಂಧಿಸಿದಂತೆ ಎಲ್ಲ ತಯಾರಿ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರ ಕುತಂತ್ರದ ರಾಜಕಾರಣಕ್ಕೆ ಜನರು ಬಲಿಯಾಗಬಾರದು. ನಮ್ಮದು ಜನ ಸ್ನೇಹಿ ಸರ್ಕಾರವಾಗಿದ್ದು, ಯಾರು ಆತಂಕ ಅನುಮಾನಕ್ಕೆ ಒಳಗಾಗಬಾರದು. ಪರಿಣಾಮಕಾರಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದರು.

ನೋವಿನಿಂದ ಕೆಲವು ಹೇಳಿಕೆ ನೀಡಿದ್ದೇನೆ. ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವಿಕರಿಸಿದ್ದೇನೆ. ನನ್ನ ಬದ್ಧತೆ ಉಳಿಸಿಕೊಳ್ಳುತ್ತೇನೆ. ಮಾತು ನಡೆಸಿಕೊಳ್ಳಲು ಆಗಲಿಲ್ಲ ಅಂದರೆ ನಾನು ಸರ್ಕಾರದಲ್ಲಿ ಇರುವುದಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *