– ಮುಂಬೈನಲ್ಲಿ ಇನ್ನೂ ಮೂರು ದಿನ ಭಾರೀ ಮಳೆ
ಬೆಂಗಳೂರು/ಮುಂಬೈ: ಮಹಾರಾಷ್ಟ್ರ, ಗುಜರಾತ್ನಲ್ಲಿ ಮುಂಗಾರು ಮಳೆ ಅನಾಹುತಗಳನ್ನ ಸೃಷ್ಟಿಸಿದರೆ, ಇತ್ತ ಕರ್ನಾಟಕಕ್ಕೆ ಈ ಭೀಕರ ಬರದ ಕರಿನೆರಳು ಆವರಿಸಿದೆ. ಹವಾಮಾನ ಇಲಾಖೆ ಪ್ರಕಾರ ಜುಲೈನಲ್ಲೂ ಮಳೆ ಕರ್ನಾಟಕಕ್ಕೆ ಕೈ ಕೊಡುವ ಸಾಧ್ಯತೆ ಇದೆ. ಮುಂದಿನ ಎರಡು ವಾರ ದಕ್ಷಿಣ ಒಳನಾಡು ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ಇಲಾಖೆ ತಿಳಿಸಿದೆ.
ಜೂನ್ನಲ್ಲಿ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ. ಆದರೆ ಜುಲೈನಲ್ಲಿ ಮಳೆ ಪ್ರಮಾಣ ತಗ್ಗಲಿದೆ. ಜೂನ್ನಲ್ಲಿ ಕಾವೇರಿಕೊಳ್ಳದಲ್ಲಿರುವ ಡ್ಯಾಂಗಳಿಗೆ 31 ಟಿಎಂಸಿಯಷ್ಟು ಸರಾಸರಿ ಒಳಹರಿವು ಇರುತ್ತಿತ್ತು. ಆದರೆ ಈ ಜೂನ್ನಲ್ಲಿ ಕೇವಲ 3 ಟಿಎಂಸಿಯಷ್ಟೇ ಒಳಹರಿವಿತ್ತು. ಜೂನ್ನಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಶೇ.28 ರಷ್ಟು ಮಳೆ ಕೊರತೆ ಉಂಟಾಗಿದೆ. ಇದನ್ನೂ ಓದಿ: 100 ವರ್ಷದಲ್ಲಿ 5ನೇ ಬಾರಿ ಕಡಿಮೆ ಮಳೆ ದಾಖಲು
35 ಮಂದಿಯನ್ನ ಬಲಿ ಪಡೆದಿರೋ ರಣ ಮಳೆಗೆ ಮುಳುಗಿರುವ ಮಹಾನಗರಿ ಮುಂಬೈನಲ್ಲಿ ಇನ್ನೂ ನಾಲ್ಕೈದು ದಿನ ಪ್ರವಾಹ ಸ್ವರೂಪಿ ಮಳೆಯಾಗುವ ಸಾಧ್ಯತೆ ಇದೆ. ರತ್ನಗಿರಿ ಜಿಲ್ಲೆಯಲ್ಲಿ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟ ಕಾರಣ 12 ಮನೆಗಳು ಕೊಚ್ಚಿಕೊಂಡು ಹೋಗಿದ್ದು, 22 ಮಂದಿ ನಾಪತ್ತೆ ಆಗಿದ್ದಾರೆ.
ಮಳೆ ಕೊಂಚ ಕಡಿಮೆ ಆಗಿದ್ರಿಂದ ಸಬ್ಅರ್ಬನ್ ರೈಲುಗಳ ಓಡಾಟ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ನಾಳೆ ಮತ್ತು ನಾಡಿದ್ದು ಮತ್ತೆ ಧಾರಾಕಾರ ಮಳೆ ಆಗಲಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ಸ್ಕೈಮ್ಯಾಟ್ ಪ್ರಕಾರ ಇಂದಿನಿಂದ ಜುಲೈ 5ರ ಶುಕ್ರವಾರದವರೆಗೆ ದಿನಕ್ಕೆ 200 ಮಿಲಿ ಮೀಟರ್ನಷ್ಟು ಮಳೆ ಆಗಲಿದೆ ಎಂದು ಹೇಳಿ ಎಚ್ಚರಿಸಿದೆ.
ಇತ್ತ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ನಲ್ಲಿ ನೀರು ತುಂಬಿ ಚರಂಡಿ ನೀರು ಉಕ್ಕಿದೆ. ಜುಲೈ 1ರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆಯವರೆಗೆ ಬರೋಬ್ಬರಿ 375 ಮಿ.ಮೀಟರ್ ಮಳೆ ಆಗಿದ್ದು, ಇದು 45 ವರ್ಷಗಳಲ್ಲೇ ಒಂದೇ ದಿನ ಮುಂಬೈನಲ್ಲಿ ಸುರಿದ ಅತೀ ಹೆಚ್ಚು ಮಳೆಯ ಪ್ರಮಾಣ. ನಾಲ್ಕು ದಿನಗಳಲ್ಲಿ 795 ಮಿ.ಮೀಟರ್ ಮಳೆಯಾಗಿದೆ.