ಸಚಿವ ಸಂಪುಟ ಪುನರ್ ರಚನೆ ಫಿಕ್ಸ್ – ಅತೃಪ್ತ, ಅಸಮಾಧಾನ ಶಾಸಕರಿಗೂ ಸಚಿವ ಸ್ಥಾನ

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಬಂಡಾಯವಾಗಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದ ಕೆಲ ಶಾಸಕರಿಗೆ ಸಚಿವ ಸ್ಥಾನ ಲಭ್ಯವಾಗುವುದು ಖಚಿತವಾಗಿದ್ದು, ಪ್ರಮುಖವಾಗಿ ಶಾಸಕರಾದ ಬಿ.ಸಿ.ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಅನುಮಾನ ಮೂಡಿದೆ.

ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿದ ಬಳಿಕ ಬಂಡಾಯ ಶಾಸಕರಿಗೂ ನೀಡಿರುವ ಭರವಸೆಯನ್ನು ಈಡೇರಿಸುವತ್ತಾ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕೆಲ ಸಚಿವರ ರಾಜೀನಾಮೆ ಪಡೆದು, ಆ ಸ್ಥಾನಗಳನ್ನು ಆದ್ಯತೆ ಮೇರೆಗೆ ಬಂಡಾಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕಾರ್ಯಕ್ಕೆ ಮೈತ್ರಿ ಪಕ್ಷಗಳು ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸದ್ಯ ಮೈತ್ರಿ ಸರ್ಕಾರದ ಸುಭದ್ರಕ್ಕಾಗಿ ಪ್ಲಾನ್ ರೂಪಿಸಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ಮೂಲಕ ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ಸದ್ಯದಲ್ಲೇ ಸಂಪುಟ ಪುನಾರಚನೆ ನಡೆಸುವ ಸಾಧ್ಯತೆಯೂ ಇದೆ. ಈ ಕುರಿತು ಸಚಿವ ಪುಟ್ಟರಾಜು ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಂಪುಟ ವಿಸ್ತರಣೆಯಾಗಿದ್ದು, ಪುನರ್ ರಚನೆಯ ಪ್ರಕ್ರಿಯೆಯೂ ಸದ್ಯದಲ್ಲೇ ಆಗಲಿದೆ. ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡಿ ಸಂಪುಟ ಪುನರ್ ರಚನೆ ಪ್ರಕ್ರಿಯೆ ನಡೆಯುತ್ತದೆ. ಇದು ಈಗಾಗಲೇ ಆರಂಭವಾಗಿದ್ದರು ಕೂಡ ತಡವಾಗಿದ್ದು, ಮುಂದಿನ ದಿನಗಳಲ್ಲಿ ನಡೆಯುತ್ತದೆ. ಶೀಘ್ರವೇ ಜೆಡಿಎಸ್‍ನಲ್ಲೂ ಇದು ನಡೆಯಲಿದೆ. ಪಕ್ಷದಲ್ಲೂ ಇಬ್ಬರು ಸಚಿವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹೊಸ ಸಂಪುಟದಲ್ಲಿ ಅಭಿವೃದ್ಧಿ ಪರ ಕೆಲಸಗಳಿಗೆ ಒತ್ತು ನೀಡಲಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ 5 ರಿಂದ 6 ಸಚಿವರ ರಾಜೀನಾಮೆ ಚಿಂತನೆ ನಡೆದಿದ್ದು, ಇದೇ ಮಾದರಿಯಲ್ಲಿ ಒಬ್ಬರು ಅಥವಾ ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡಿ ಪಡೆದಿರುವ ಸ್ಥಾನಗಳಲ್ಲಿ ಕಾಂಗ್ರೆಸ್ ನಿಂದ ಶಾಸಕರಾದ ಬಿ.ಸಿ. ಪಾಟೀಲ್, ಹಿರಿಯರಾದ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗಲಿದ್ಯಾ ಎಂಬುವುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *