– ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಬೆಂಗಳೂರು: ಗುತ್ತಿಗೆ ಮೀಸಲಾತಿ ಬಳಿಕ ಈಗ ವಸತಿ ಯೋಜನೆಯಲ್ಲಿ (Housing Project) ಮುಸ್ಲಿಮ್ ಮೀಸಲಾತಿ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ (Karnataka Government) ಮುದ್ರೆ ಒತ್ತಿದೆ.
ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಗಳ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಅಲ್ಪಸಂಖ್ಯಾತರಿಗೆ 10% ಮೀಸಲಾತಿ ನೀಡಲಾಗಿದ್ದು ಈಗ 15%ಕ್ಕೆ ಮೀಸಲಾತಿ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ.
ಮೊದಲೇ ನಿಗದಿಯಾಗಿದ್ದ ಕ್ಯಾಬಿನೆಟ್ನಲ್ಲಿ ಈ ವಿಷಯದ ಪ್ರಸ್ತಾಪ ಇರಲಿಲ್ಲ. ಆದರೆ ಕ್ಯಾಬಿನೆಟ್ ಹೆಚ್ಚುವರಿ ಅಜೆಂಡಾದಲ್ಲಿ ವಿಷಯ ಸೇರ್ಪಡೆ ಮಾಡಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವಲ್ಲಿ ವಸತಿ ಸಚಿವ ಜಮೀರ್ ಅಹಮದ್ (Zameer Ahmed) ಯಶಸ್ವಿಯಾಗಿದ್ದಾರೆ.
ಮೀಸಲಾತಿ ಹೆಚ್ಚಳಕ್ಕೆ ನಿಯಮಾವಳಿಗಳನ್ನು ತಿದ್ದುಪಡಿ ಮಾಡುವ ಅಗತ್ಯ ಇಲ್ಲ, ಸಂಪುಟದ ತೀರ್ಮಾನದ ಮೂಲಕ ಸರ್ಕಾರದ ಆದೇಶ ಹೊರಡಿಸಿ ಮೀಸಲಾತಿಯನ್ನು ಹೆಚ್ಚಳ ಮಾಡಬಹುದು.
ಇನ್ನು ಮುಸ್ಲಿಮ್ ವಸತಿ ಮೀಸಲಾತಿ ಹೆಚ್ಚಳವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸಾಚಾರ್ ಕಮಿಟಿ ವರದಿಯನ್ನೂ ಕೂಡ ಈಗ ಕೇಂದ್ರ ಪರಿಗಣಿಸುತ್ತಿದೆ. ಕೇಂದ್ರದ ಸೂಚನೆಗಳನ್ನು ಗಮನಿಸಿ ಸಾಮಾಜಿಕ ನ್ಯಾಯದ ಪಾಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದು ಎಲ್ಲಾ ಅಲ್ಪಸಂಖ್ಯಾತರಿಗೂ ಅನ್ವಯವಾಗಲಿದೆ. ಮುಸ್ಲಿಮ್, ಜೈನರು, ಕ್ರಿಶ್ಚಿಯನ್ ಎಲ್ಲರೂ ಕೂಡ ಇದರಲ್ಲಿ ಒಳಗೊಳ್ಳುತ್ತಾರೆ. ಇದಕ್ಕೆ ಬೇಕಾದ ಹಲವು ಅಧ್ಯಯನ ವರದಿಗಳೂ ಕೂಡ ಇವೆ ಅಂತಾ ಸ್ಪಷ್ಟಪಡಿಸಿದರು. ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಲ್ಲ. ವಸತಿ ಹೀನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎಂಬುದು ಸರ್ಕಾರದ ಉದ್ದೇಶ ಅಂತಾ ತಿರುಗೇಟು ನೀಡಿದರು.
ರಾಜ್ಯದಲ್ಲಿ ಇರುವ ವಸತಿ ಯೋಜನೆಗಳು
ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ (ಎಸ್ ಸಿ, ಎಸ್ ಟಿ ಸಮುದಾಯಗಳಿಗೆ ಮಾತ್ರ)
ಪ್ರಧಾನ ಮಂತ್ರಿ ಆವಾಸ್ ಯೋಜನೆ
ವಾಜಪೇಯಿ ನಗರ ವಸತಿ ಯೋಜನೆ
ದೇವರಾಜ ಅರಸು ವಸತಿ ಯೋಜನೆ
ಬಸವ ವಸತಿ ಯೋಜನೆ
ವಸತಿ ಇಲಾಖೆಯಲ್ಲಿರುವ ಮೂರು ನಿಗಮಗಳು
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ
ಕರ್ನಾಟಕ ಗೃಹ ಮಂಡಳಿ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ