ಉದ್ಯೋಗ ಭಾಗ್ಯ: ಯುವಜನರಿಗೆ ಸಿಎಂ ಬಜೆಟ್ ನಲ್ಲಿ ಏನಿದೆ?

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2018-19ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ 794 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಹೊಸ ಯೋಜನೆಗಳು:
ಈ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ 2.50 ಲಕ್ಷ ಜನರಿಗೆ ವೃತ್ತಿ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರವು (ಸಿಡಾಕ್) ಮತ್ತು ಯು.ಎನ್.ಡಿ.ಪಿ. ಸಹಯೋಗದೊಂದಿಗೆ 16 ಜಿಲ್ಲೆಗಳಲ್ಲಿ ಸಂಭಾವ್ಯ ಉದ್ದಿಮೆದಾರರಿಗೆ ತರಬೇತಿಯನ್ನು ನೀಡಲು ದಿಶಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ 32,000 ಜನರಿಗೆ ಪ್ರಯೋಜನ ಪಡೆಯಲಿದ್ದಾರೆ.

2018-19ನೇ ಸಾಲಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಿ 2 ಕೋಟಿ ರೂ. ಅನುದಾನದಲ್ಲಿ 1 ಲಕ್ಷ ಜನರಿಗೆ ಈ ಯೋಜನೆಯ ಪ್ರಯೋಜನವನ್ನು ಒದಗಿಸುವ ಉದ್ದೇಶವಿದೆ. ಅಲ್ಲದೇ ಈ ಬಾರಿ ಡಿಜಿಟಲ್ ಲರ್ನಿಂಗ್‍ಗೆ ಒತ್ತು ನೀಡಲಾಗುತ್ತದೆ ಮತ್ತು 120 ಸರ್ಕಾರಿ ಐ.ಟಿ.ಐ.ಗಳಿಗೆ 10 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿರುವ ಮಲ್ಟಿಮೀಡಿಯಾ ಕಂಪ್ಯೂಟರ್ ಲ್ಯಾಬ್‍ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಲ್ಪಿಸುವ ಮೂಲಕ ಕೌಶಲ್ಯ ತರಬೇತಿ ಕಾರ್ಯಗತಗೊಳಿಸಿ ಪರಿಣಾಮಕಾರಿಯಾಗಿ ಬಳಕೆ ಮಾಡಲು ನಿರ್ಧರಿಸಲಾಗಿದೆ.

ವಿದೇಶಗಳಲ್ಲಿ ಉದ್ಯೋಗ ಮತ್ತು ಜೀವನೋಪಾಯವನ್ನು ಹೊಂದಲು ಹಾಗೂ ಕರ್ನಾಟಕವನ್ನು ವಿದೇಶಿ ಉದ್ಯೋಗಕ್ಕೆ ಆದ್ಯತಾ ರಾಜ್ಯವನ್ನಾಗಿ ರೂಪಿಸಲು ರಾಜ್ಯದ ಯುವ ಜನತೆಗೆ ಅಗತ್ಯ ತರಬೇತಿ ಮತ್ತು ಪ್ರೋತ್ಸಾಹವನ್ನು ನೀಡುವ ಗುರಿ ಹೊಂದಿದೆ. 2018-19ನೇ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಒಟ್ಟಾರೆಯಾಗಿ 794 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *