ಭದ್ರಾ ಡ್ಯಾಂ ಎಲ್ಲ ಗೇಟ್ ಓಪನ್: 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Public TV
1 Min Read

ಶಿವಮೊಗ್ಗ: ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಒಳ ಬರುತ್ತಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು ಹೊರ ಹರಿವಿನ ಮಟ್ಟವನ್ನು ಹೆಚ್ಚಿಸಿದ್ದಾರೆ. ಆದರೆ ಇತ್ತ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ.

90 ಸಾವಿರ ಕ್ಯೂಸೆಕ್ ಒಳಹರಿವು ಇರುವುದರಿಂದ ಜಲಾಶಯದ ಎಲ್ಲಾ ಗೇಟುಗಳ ಮೂಲಕ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಜಲಾಶಯದಿಂದ ಸಾಮಾನ್ಯವಾಗಿ 20 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ಆದರೆ ಈ ಬಾರಿ ಭದ್ರಾ ನದಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಹೊರನಾಡು, ಶೃಂಗೇರಿ ಇನ್ನಿತರ ಕಡೆ ವ್ಯಾಪಕ ಮಳೆಯಾಗುತ್ತಿದ್ದು, ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯ ಒಳಹರಿವು ನಿರಂತರವಾಗಿ ಹೆಚ್ಚುತ್ತಿದೆ.

ಅಧಿಕಾರಿಗಳು ಡ್ಯಾಮ್‍ನ ಎಲ್ಲ ಗೇಟ್‍ಗಳನ್ನು ತೆರದಿದ್ದು, 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿದೆ. ಇಷ್ಟು ಪ್ರಮಾಣದ ನೀರು ಕಳೆದ ಕೆಲವು ವರ್ಷಗಳಿಂದ ನದಿ ಪಾತ್ರದ ಜನರು ಕಂಡಿರಲಿಲ್ಲ.

ತಾಲೂಕು ಆಡಳಿತ ತಗ್ಗು ಪ್ರದೇಶದ ನಿವಾಸಿಗಳನ್ನು ತೆರವುಗೊಳಿಸಿ, ಗಂಜಿ ಕೇಂದ್ರ ತೆರೆದು ಆಸರೆ ನೀಡುತ್ತಿದೆ. ಸುಣ್ಣದಹಳ್ಳಿ, ಹೊಳೆಹೊನ್ನೂರು, ಕವಲಗುಂದಿಯಲ್ಲಿ ಗಂಜೆ ಕೇಂದ್ರ ಆರಂಭಗೊಂಡಿವೆ. ಭದ್ರಾವತಿಯ ಹೊಸ ಸೇತುವೆ ಮೇಲೆ ಐದು ಅಡಿ ನೀರು ಹರಿಯುತ್ತಿದ್ದು, ಇದು ರಾತ್ರಿ ವೇಳೆಗೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರಾ ನದಿ ಪಾತ್ರದಲ್ಲಿ ಹೀಗೆ ಮಳೆ ನಿರಂತರವಾಗಿ ಮುಂದುವರಿದರೆ ನೀರಿನ ಹೊರ ಹರಿವು ಮತ್ತಷ್ಟು ಹೆಚ್ಚಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *