ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

Public TV
1 Min Read

ಬೆಂಗಳೂರು: ಫೆಬ್ರವರಿ 13ಕ್ಕೆ ಕರ್ನಾಟಕ ಸ್ತಬ್ಧವಾಗಲಿದ್ದು, ಅಂದು ಯಾವುದೇ ಓಲಾ, ಊಬರ್, ಆಟೋ, ಟ್ಯಾಕ್ಸಿಗಳು, ರಸ್ತೆಗಿಳಿಯಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಅಖಂಡ ಕರ್ನಾಟಕ ಮುಷ್ಕರಕ್ಕೆ ಕರೆ ನೀಡಿದೆ.

ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, 400ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಓಲಾ, ಊಬರ್, ಟ್ಯಾಕ್ಸಿ, ಲಾರಿ ಮಾಲೀಕರ ಸಂಘ, ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆ, ವಿವಿಧ ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ಸಿಕ್ಕಿದೆ.

ಅಂದು ಬೆಳಗ್ಗೆ 11 ಘಂಟೆಗೆ ಟೌನ್ ಹಾಲ್‍ನಿಂದ ಫ್ರೀಡಂಪಾರ್ಕ್ ತನಕ ಬೃಹತ್ ರ‍್ಯಾಲಿ ಮಾಡಲಾಗುತ್ತೆ. ವರದಿ ಜಾರಿಗೆ ಆಗ್ರಹಿಸಿ ನಗರದ ಮೌರ್ಯ ಸರ್ಕಲ್ ಬಳಿ ಕಳೆದ 96 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಇದೇ 13ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

ಏನಿದು ಸರೋಜಿನಿ ಮಹಿಷಿ ವರದಿ?
1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಿಷಿಯವರಿಗೆ ಕೇಳಿಕೊಂಡಿತ್ತು.

ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತವಾಗಿದ್ದು, ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಈ ವರದಿ ಪ್ರತಿಪಾದಿಸುತ್ತೆ. ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಳಿಗೆ ಆಧಾರವಾಗಿದೆ.

1986ರಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕನ್ನಡಿಗರಿಗೆ ಮೊದಲು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ವರದಿಯಲ್ಲಿತ್ತು. ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ.

ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *