8 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ದಿಢೀರ್ ಪ್ರತ್ಯಕ್ಷ!

Public TV
2 Min Read

ಕಾರವಾರ: ಸರ್ಕಾರಿ ನೌಕರರು ಎಂದರೆ ಹೀಗೂ ಇರುತ್ತಾರಾ ಎಂದು ಯಾರೂ ಎಣಿಸಿರಲೂ ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಣ್ಣ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ 8 ವರ್ಷದಿಂದ ಕೆಲಸಕ್ಕೆ ಬಾರದೇ ಸರ್ಕಾರಿ ಸಂಬಳ ಎಣಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಮುಂಡಗೋಡಿನ ಚಿಕ್ಕ ನೀರಾವರಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ ಕಣ್ಣಿ ಕರ್ತವ್ಯ ಹಾಜರಾಗದೆ ಸಂಬಳ ಪಡೆದ ಅಧಿಕಾರಿ. ಅಧಿಕಾರಿಯ ಗೈರು ಹಾಜರಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಬಂದು ಆತನಿಗೆ ನೋಟಿಸ್ ನೀಡಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದ್ದರು. ಆದ್ರೆ ಈತ ಮಾತ್ರ ಕೆಲಸಕ್ಕೆ ಚಕ್ಕರ್ ಹೊಡೆದು ಅಧಿಕಾರಿಗಳಿಗೆ 8 ವರ್ಷದಿಂದ ಯಾಮಾರಿಸಿದ್ದ. ಈ ವಿಷಯ ತಡವಾಗಿ ಬೆಳಕಿಗೆ ಬಂದು ಈತನನ್ನು ಬಂಧಿಸಲು ಸಹ ದೂರು ನೀಡಲಾಗಿತ್ತು.

ಸಂಬಳ ಪಡೆದು ಕರ್ತವ್ಯಕ್ಕೆ ಬಾರದೇ ಇದ್ದ ಈತ ಬಂಧನದ ಭಯದಲ್ಲಿ ಯಾರಿಗೂ ತಿಳಿಯದಂತೆ ಕಚೇರಿಯಲ್ಲಿ ಪ್ರತ್ಯಕ್ಷವಾಗಿ ರಾಜೀನಾಮೆ ಸಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಕಳೆದ 8 ದಿನಗಳ ಹಿಂದೆ ಕಚೇರಿಗೆ ಆಗಮಿಸಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಘಟನೆಯೂ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕ ನೀರಾವರಿ ಉಪ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ವಿನೋದ ಕಣ್ಣಿ 8 ವರ್ಷದಿಂದ ಕೆಲಸಕ್ಕೆ ಹಾಜುರಾಗದೆ ಸಂಬಳ ಪಡೆದಿದ್ದ. 2009 ಸೆ.10 ರಿಂದ 2012 ಜ.25ರ ವರೆಗೂ ಕರ್ತವ್ಯ ನಿರ್ವಹಿಸಿದ್ದ ವಿನೋದ ಕನ್ಣಿ 2012 ಜ.26ರಿಂದ ಇದೂವರೆಗೂ ಕಚೇರಿಗೆ ಬಾರದೆ ಗೈರು ಹಾಜರಾಗಿದ್ದಾನೆ. ಈ ಕುರಿತು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಹಲವಾರು ಭಾರಿ ಪತ್ರ ಬರೆದಿದ್ದರು. ಇದಕ್ಕೆ ಇಂಜಿನಿಯರ್ ವಿನೋದ ಕಣ್ಣಿ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ.

ಈತನ ವಿರುದ್ಧ ಕರ್ತವ್ಯ ಲೋಪದ ದೂರು ದಾಖಲಾಗುತ್ತಿದ್ದಂತೆ ಕಳೆದ ಎಂಟು ದಿನಗಳ ಹಿಂದೆ ಕಚೇರಿಗೆ ಆಗಮಿಸಿ ರಾಜೀನಾಮೆ ನೀಡಿ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಹೆಚ್ಚು ಸ್ಪಷ್ಟನೆ ನೀಡಲು ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಹಿಂಜರಿದಿದ್ದು, 8 ವರ್ಷದಿಂದ ಕೆಲಸಕ್ಕೆ ಹಾಜರಾಗದೆ ಇರುವ ಕುರಿತು ಮಾಹಿತಿ ನೀಡಿ ಆತ ರಾಜೀನಾಮೆ ನೀಡಿ ಹೋಗಿರುವ ಕುರಿತು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *