ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು

Public TV
2 Min Read

ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ʻಕಾಂತಾರ ಚಾಪ್ಟರ್-1ʼ (Kantara Chapter 1) ಸಹ ಕಲಾವಿದ ವಿಜು ವಿ.ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೈವದ ಉತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವನ್ನಪ್ಪಿದ್ದು ಕಾಂತಾರ ಚಿತ್ರತಂಡವನ್ನು ಚಿಂತೆಗೀಡಾಗುವಂತೆ ಮಾಡಿದೆ.

ಹೌದು… ಇಂದು ತೀರ್ಥಹಳ್ಳಿ ಬ್ಯಾಕ್ ವಾಟರ್‌ನಲ್ಲಿ (Thirthahalli Backwaters) ಚಿತ್ರೀಕರಣಕ್ಕೆ ಸಿದ್ಧತೆ ನಡೆದಿತ್ತು. ದೈವದ ನೇಮೋತ್ಸವದ ಚಿತ್ರೀಕರಣಕ್ಕೆ ಕಾಂತಾರ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ದೈವದ ಉತ್ಸವ ಸನ್ನಿವೇಶ ಚಿತ್ರೀಕರಣಕ್ಕಾಗಿ ಬ್ಯಾಕ್‌ ವಾಟರ್‌ನಲ್ಲಿ ಅದ್ಧೂರಿ ಸೆಟ್‌ ಕೂಡ ಹಾಕಲಾಗಿತ್ತು. ಇದೇ ಚಿತ್ರೀಕರಣದಲ್ಲಿ ಕೇರಳದ ನಟ ಬಿಜು ವಿಕೆ ಭಾಗಿಯಾಗಬೇಕಿತ್ತು, ದುರಾದೃಷ್ಟವಶಾತ್ ದೈವದ ಉತ್ಸವ ಚಿತ್ರೀಕರಣಕ್ಕೂ ಮುನ್ನ ಸಹ ಕಲಾವಿದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!

ಎದೆ ನೋವು ಕಾಣಿಸಿಕೊಂಡಿತ್ತು
ಕೇರಳದ (Kerala) ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ರಾತ್ರಿ ಏಕಾಏಕಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ವಿಜು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು

ಸದ್ಯ ವಿಜು ಅವರ ಮೃತದೇಹ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿರಿಸಲಾಗಿದೆ. ಪೊಲೀಸರು ಕೇರಳದಿಂದ ವಿಜು ಕುಟುಂಬಸ್ಥರ ಆಗಮನಕ್ಕೆ ಕಾಯುತ್ತಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ

ಸಾಲು ಸಾಲು ವಿಘ್ನ:
ʻಕಾಂತಾರ ಚಾಪ್ಟರ್ 1ʼಗೆ ಸಾಲು ಸಾಲು ವಿಘ್ನ ಎದುರಾಗುತ್ತಲೇ ಇದೆ. ಈ ಮೊದಲು ಹಾಸನದಲ್ಲಿ ನಡೆದ ಶೂಟಿಂಗ್‌ನಲ್ಲಿ ಬೆಂಕಿ ಹಾಕಿದ್ದಕ್ಕೆ ಮರಗಳಿಗೆ ಹಾನಿಯಾಗಿತ್ತು. ಇದಾದ ಬಳಿಕ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಗವಿಗುಡ್ಡ ಪ್ರದೇಶದ ಅರಣ್ಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ಸ್ಥಳಿಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ಕಾಂತಾರ ಚಿತ್ರತಂಡದ ವಿರುದ್ಧ ಅಕ್ರಮವಾಗಿ ಮರ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತು. ಇದನ್ನೂ ಓದಿ: ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!

ಅಷ್ಟೇ ಅಲ್ಲ ಚಿತ್ರತಂಡದ ಕಲಾವಿದರನ್ನು ಕರೆದೊಯ್ಯುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತವಾಗಿ, ಬಸ್ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಾಯಗೊಂಡಿದ್ದರು.‌ ನಂತರ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಹ ಕಲಾವಿದ ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಆದ್ರೆ ರಾಕೇಶ್‌ ಅವರ ಚಿತ್ರೀಕರಣದ ಪಾತ್ರ ಮುಗಿದಿತ್ತು. ಇದಾದ ಬಳಿಕ ನಟ ರಿಷಬ್‌ ಶೆಟ್ಟಿ ಕೂಡ ತಮ್ಮ ಪತ್ನಿಯೊಂದಿಗೆ ರಾಕೇಶ್‌ ಪೂಜಾರಿ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಈ ಬೆನ್ನಲ್ಲೇ ಕೇರಳದ ಕಲಾವಿದ ವಿ.ಕೆ ವಿಜು ಹೃದಯಾಘಾತದಿಂದ ಸಾವನ್ನಪ್ಪಿರುವುದು ಚಿತ್ರತಂಡವನ್ನು ಚಿಂತೆಗೀಡಾಗುವಂತೆ ಮಾಡಿದೆ.

Share This Article