ತೆರೆಗೆ ಬರಲಿದೆ `ಮಹಾಭಾರತ’: ಹಣ ಹೂಡಲಿರೋ ಕನ್ನಡಿಗ ಬಿಆರ್ ಶೆಟ್ಟಿ

Public TV
1 Min Read

– ನೂರು ಭಾಷೆಗಳಿಗೆ ಆಗಲಿದ್ಯಂತೆ ಡಬ್

ಬೆಂಗಳೂರು: ಕನ್ನಡ ಸಿನಿಮಾರಂಗ ಭಾರತದ ಉಳಿದ ಯಾವುದೇ ಸಿನಿಮಾ ರಂಗಕ್ಕೂ ಕಡಿಮೆ ಇಲ್ಲ. ಇತ್ತೀಚಿಗಷ್ಟೇ ನಿರ್ಮಾಪಕ ಮುನಿರತ್ನ, ಬಾಹುಬಲಿ ಮೀರಿಸುವಂತೆ `ಕುರುಕ್ಷೇತ್ರ’ ಸಿನಿಮಾ ಮಾಡುತ್ತೇನೆ ಅಂದಿದ್ರು. ಇದೀಗ ವಿಶ್ವವೇ ತಿರುಗಿ ನೋಡುವಂತೆ ಕನ್ನಡಿಗರೊಬ್ಬರು ಆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

ಹೌದು. ಕರ್ನಾಟಕ ವಿಶ್ವ ಸಿನಿಮಾ ಭೂಪಟದಲ್ಲಿ ತನ್ನ ಗುರುತು ಮೂಡಿಸುತ್ತಿದೆ. ಕರ್ನಾಟಕದ ಕರಾವಳಿ ಮೂಲದ ದುಬೈ ಉದ್ಯಮಿ ಬಿಆರ್ ಶೆಟ್ಟಿ ಅಂಥಹದ್ದೊಂದು ಪರಾಕ್ರಮಕ್ಕೆ ಕೈಹಾಕಿದ್ದಾರೆ. ಅಂದ್ರೆ ಮಹಾಭಾರತವನ್ನು ಸಿನಿಮಾ ರೂಪಕ್ಕೆ ತರಲು ನಿರ್ಧಾರ ಮಾಡಿದ್ದಾರೆ. ಬರೋಬ್ಬರಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಸಿನಿಮಾ 2018ರಲ್ಲಿ ಚಿತ್ರೀಕರಣ ಆರಂಭವಾಗಿ 2020ಕ್ಕೆ ತೆರಕಾಣಲಿದೆ.

ಸಾವಿರ ಕೋಟಿಯ ಚಿತ್ರದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪುರಸ್ಕೃತ ತಂತ್ರಜ್ಞರು ಇರಲಿದ್ದಾರೆ. ಬಾಹುಬಲಿ ಸಿನಿಮಾ ರೀತಿಯಲ್ಲೇ ಎರಡು ಭಾಗಗಲ್ಲಿ ಚಿತ್ರ ಬರುವುದು ಪಕ್ಕಾ ಆಗಿದೆ. 2020ರಲ್ಲಿ ಚಿತ್ರ ಬಿಡುಗಡೆಯಾದ ಬಳಿಕ 90 ದಿನಗಳಲ್ಲಿ ಮಹಾಭಾರತ ಪಾರ್ಟ್-2 ಸಿನಿಮಾ ತೆರೆಗೆ ಬರಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಚಿತ್ರೀಕರಣವಾಗಲಿದ್ದು, ಭಾರತದ ಪ್ರಮುಖ ಭಾಷೆಗಳೂ ಸೇರಿದಂತೆ 100 ಭಾಷೆಗಳಲ್ಲಿ ಡಬ್ ಆಗಲಿದೆ. ವಿಶ್ವಾದ್ಯಂತ ಮೂರು ಬಿಲಿಯನ್ ಜನರನ್ನು ತಲುಪುವ ನಿರೀಕ್ಷೆಯಿದೆ.

ಅದ್ಧೂರಿ ಬಜೆಟ್‍ನ ಈ ಸಿನಿಮಾವನ್ನು ಮಲೆಯಾಳಂನ ಖ್ಯಾತ ನಿರ್ದೇಶಕ ಶ್ರೀಕುಮಾರ್ ಮೆನನ್ ನಿರ್ದೇಶನ ಮಾಡಲಿದ್ದು, ಮಲಯಾಳಂನ ಲೆಜೆಂಡರಿ ನಟ ಮೋಹನ್ ಲಾಲ್, ಬಿಟೌನ್ ಕಿಂಗ್ ಖಾನ್ ಶಾರೂಖ್ ಪ್ರಮುಖ ಪಾತ್ರಗಳಿಗೆ ಫಿಕ್ಸ್ ಆಗಿದ್ದಾರೆ. ಇಡೀ ಚಿತ್ರಕಥೆ ಭೀಮನ ಸುತ್ತವೇ ತಿರುಗಲಿದೆ. ಇನ್ನುಳಿದ ವಿಚಾರಗಳು ಇನ್ನಷ್ಟೇ ತಿಳಿದುಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *