ಕಸಾಪ ಅಧ್ಯಕ್ಷರಿಗೆ ಯೂಟ್ಯೂಬ್ ಅಂದ್ರೆ ಏನಂತ ಗೊತ್ತಿಲ್ಲ- ಮುರಳೀಧರ ಉಪಾಧ್ಯಾಯ ಅಸಮಾಧಾನ

Public TV
1 Min Read

ಉಡುಪಿ: ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಅಧ್ಯಕ್ಷ ಮನು ಬಳಿಗಾರ್ ಗೆ ಯುಟ್ಯೂಬ್ ಅಂದ್ರೆ ಏನು ಅಂತ ಗೊತ್ತಿಲ್ಲ. ಸಮ್ಮೇಳನ ಲೈವ್ ಮಾಡ್ರಿ ಅಂದ್ರೆ ನಾನು ಸಾಹಿತ್ಯದ ವಿದ್ಯಾರ್ಥಿ ಟೆಕ್ನಿಕಲ್ ಅಲ್ಲ ಅಂತ ಹೇಳಿದ್ದಾರೆ ಎಂದು ಹಿರಿಯ ಸಾಹಿತಿ ಮುರಳೀಧರ ಉಪಾಧ್ಯಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನ ಯುಟ್ಯೂಬ್ ಅಥವಾ ವೆಬ್ ಸೈಟ್‍ನಲ್ಲಿ ಈವರೆಗೆ ಪ್ರತೀ ವರ್ಷ ಮೂರೂ ದಿನ ಪ್ರಸಾರವಾಗುತ್ತಿತ್ತು. ಆದ್ರೆ ಈ ಬಾರಿ ಹಾಗೆ ಆಗಲ್ವಂತೆ. ಜನವರಿ ನಾಲ್ಕರಂದು ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯೂಟ್ಯೂಬ್ ಅಥವಾ ಅಂತರ್ಜಾಲದಲ್ಲಿ ನೇರಪ್ರಸಾರ ಮಾಡಬೇಕು ಎಂದು ಹಿರಿಯ ಸಾಹಿತಿ ಮುರಳೀಧರ ಉಪಾಧ್ಯಾಯ ಫೋನ್ ಮೂಲಕ ಒತ್ತಾಯ ಮಾಡಿದ್ದಾರೆ.

 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುರಳೀಧರ ಉಪಾಧ್ಯಾಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ಯೂಟ್ಯೂಬ್‍ನಲ್ಲಿ ನೇರ ಪ್ರಸಾರ ಮಾಡುವಂತೆ ವಿನಂತಿಸಿದೆ. ಅದಕ್ಕೆ ಅವರು, ಯೂಟ್ಯೂಬ್ ಅಂದ್ರೆ ಏನ್ರೀ? ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿ ಅಂತ ಹೇಳಿದ್ದಾರೆ ಎಂದು ಉಪಾಧ್ಯಾಯ ಅವರು ದೂರಿದ್ದಾರೆ.

ಯೂಟ್ಯೂಬ್‍ ಅಂದ್ರೆ ಏನು ಎಂದು ಗೊತ್ತಿಲ್ಲದಿರುವುದು ಕಸಾಪ ಅಧ್ಯಕ್ಷರ ವೈಯಕ್ತಿಕ ಸಮಸ್ಯೆ. ನನ್ನಂತಹ ಹಿರಿಯ ನಾಗರೀಕರು, ಸಾಹಿತ್ಯ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ವಿದೇಶಗಳಲ್ಲಿ ಇದ್ದಾರೆ. ನಾವಲ್ಲಿಗೆ ಬರಲು ಸಾಧ್ಯವಿಲ್ಲ. ಕಾರ್ಯಕ್ರಮ ನೋಡೋದಾದ್ರೂ ಹೇಗೆ ಅಂತ ಉಪಾಧ್ಯಾಯ ಅವರು ಪ್ರಶ್ನೆ ಮಾಡಿದ್ದಾರೆ.

ಯೂಟ್ಯೂಬ್‍ನಲ್ಲಿ ನೇರಪ್ರಸಾರ ಮಾಡಿದರೆ ರಾಜ್ಯ, ದೇಶ- ವಿದೇಶದ ಕನ್ನಡ ಜನರಿಗೆ ಬಹಳ ಅನುಕೂಲವಾಗುತ್ತದೆ. ಸರಕಾರ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ರೂ. ಖರ್ಚು ಮಾಡುತ್ತದೆ. ಯೂಟ್ಯೂಬ್‍ನಲ್ಲಿ ನೇರಪ್ರಸಾರ ಮಾಡಲು ಯಾವುದೇ ಖರ್ಚು ಇಲ್ಲ. ಇದು ಕನ್ನಡ ಸಾಹಿತ್ಯ ಪರಿಷತ್‍ನ ಸಾಮಾಜಿಕ ಜವಾಬ್ದಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಹಿತ್ಯ ಸಮ್ಮೇಳನಕ್ಕೆ ಬರಲಾಗದವರು ತಾವು ಇದ್ದಲ್ಲಿಂದಲೇ ಕನ್ನಡದ ಕಂಪು ಸವಿಯುವಂತಾಗಲು ಅಂತರ್ಜಾಲದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಬೇಕು ಎಂದು ಸಾಹಿತಿ ಮುರಳೀಧರ ಉಪಾಧ್ಯಾಯ ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *