ಕನ್ನಡಿಗರು ನನ್ನ ಹೃದಯದಲ್ಲಿದ್ದಾರೆ, ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನ ಮರೆಯಬೇಡಿ: ವೆಂಕಯ್ಯ ನಾಯ್ಡು

Public TV
1 Min Read

ಚಿಕ್ಕಬಳ್ಳಾಪುರ: ಕನ್ನಡಿಗರನ್ನು ನನ್ನ ಹೃದಯದಲ್ಲಿ ಇರಿಸಿಕೊಂಡಿದ್ದೇನೆ. ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನ ಮರೆಯಬೇಡಿ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮದ ಶ್ರೀ ಸತ್ಯಾ ಸಾಯಿ ವಿದ್ಯಾಸಂಸ್ಥೆಗಳ ಆವರಣದ ಪ್ರೇಮಾಮೃತಂ ಮಹಲ್ ನಲ್ಲಿ ನಡೆದ ಶ್ರೀ ಸತ್ಯಸಾಯಿಬಾಬಾರ 93 ನೇ ಜನ್ಮದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಭಾಗವಹಿಸಿದ್ದರು. ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕಳೆದ 4 ದಶಕಗಳಿಂದ ನನಗೆ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಕನ್ನಡಿಗರನ್ನು ಯಾವಾಗಲೂ ನನ್ನ ಹೃದಯದಲ್ಲಿ ಇರಿಸಿಕೊಂಡಿದ್ದೇನೆ ಎಂದರು.

ಸತ್ಯ ಸಾಯಿಬಾಬಾರ ಜೀವನ, ಸೇವಾ ಮನೋಭಾವ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇಂದಿನ ಯುವಕರು ತಮ್ಮ ಜೀವನದಲ್ಲಿ ಎಂದಿಗೂ 5 ವಿಷಯಗಳನ್ನ ಮರೆಯಬಾರದು. ಹೆತ್ತ ತಂದೆ-ತಾಯಿ, ತಾವು ಹುಟ್ಟಿದ ಊರು, ತಮ್ಮ ದೇಶ ಹಾಗೂ ವಿದ್ಯೆ ಕಲಿಸುವ ಗುರುಗಳನ್ನ ಎಂದಿಗೂ ಮರೆಯಬಾರದು. ಇದರ ಜೊತೆ ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನು ಮಾತ್ರ ಮರೆಯಬಾರದು ಎಂದು ಹೇಳಿದರು. ಸರ್ವೆಜನ ಸುಖಿನೋಭವಂತು

ಭಾರತ ದೇಶ ಮಾನವೀಯತೆ, ವಸು ದೈವ ಕುಟುಂಬ, ಸರ್ವೆಜನ ಸುಖಿನೋಭವಂತು ಎಂಬ ತತ್ವಗಳನ್ನು ಅಳವಡಿಸಿಕೊಂಡಿದೆ. ಇಂದು ವಿಶ್ವವಿಡೀ ಭಾರತದತ್ತ ನೋಡುತ್ತಿದೆ. ಅಲ್ಲದೇ ಇಡೀ ವಿಶ್ವಕ್ಕೆ ಭಾರತ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಯೋಗ ಹಾಗೂ ಆಧ್ಯಾತ್ಮದ ಮೂಲಕ ವಿಶ್ವದೆಲ್ಲೆಡೆ ಮಾನವೀಯತೆ ಭೋದನೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯಿರುವ ದೇಶದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು. ನಮ್ಮ ಜೀವಿತಾವಧಿಯಲ್ಲಿ ಮನುಷ್ಯ ಜನಸೇವೆ ಮಾಡಬೇಕು. ಏನಾದರೂ ವಿಶೇಷ ಸಾಧನೆ, ಸೇವೆ ಮಾಡಿದರೆ ಮಾತ್ರ ಸಮಾಜ ನಮ್ಮನ್ನು ನೆನಪಿಸುತ್ತದೆ. ಅದ್ದರಿಂದ ನಮ್ಮ ಸಾಧನೆಗೆ ಕಾರಣವಾಗುವ ಗುರುಗಳನ್ನು ಮರೆಯಬೇಡಿ. ಈಗನ ಗೂಗಲ್ ನಿಂದಲೂ ಗುರುವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹಾಗೂ ಕೃಷಿ ಸಚಿವ ಶಿವಶಂಕರರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *