ಈ ವಾರ ಥೇಟರುಗಳನ್ನು ಆವರಿಸಿಕೊಳ್ಳಲಿದೆ ‘ವೆನಿಲ್ಲಾ’ ಫ್ಲೇವರ್!

Public TV
2 Min Read

ಬೆಂಗಳೂರು: ವೆನಿಲ್ಲಾ ಅಂದಾಕ್ಷಣ ಬಹುತೇಕರಿಗೆ ನೆನಪಾಗೋದು ಐಸ್‍ಕ್ರೀಮು. ಅಂಥಾ ನಯವಾದ ಹೆಸರಿನ ಸುತ್ತಾ ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ಕಥೆ ಅನಾವರಣಗೊಳ್ಳುತ್ತದೆ ಎಂದಾದರೆ ಖಂಡಿತಾ ಆ ಬಗೆಗೊಂದು ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗಾಗಲೇ ಹಲವು ಕಾರಣಗಳಿಂದ ಕ್ಯೂರಿಯಾಸಿಟಿಗೆ ಕಾರಣವಾಗಿರುವ ‘ವೆನಿಲ್ಲಾ’ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

ಅವಿನಾಶ್ ಮೊದಲ ಬಾರಿಗೆ ವೆನಿಲ್ಲಾ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಅವಿನಾಶ್‍ಗೆ ನಾಯಕಿಯಾಗಿ ಸ್ವಾತಿ ಬಣ್ಣ ಹಚ್ಚಿದ್ದಾರೆ. ವೆನಿಲ್ಲಾ ಚಿತ್ರದ ಕಥೆ ಏನೆಂಬವುದು ಸಿನಿಮಾ ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ನಯವಾದ, ನಾಲಗೆಗೆ ಹಿತವೆನಿಸುವ ವೆನಿಲ್ಲ ಚಿತ್ರದ ಕಥೆಗೆ ಮರ್ಡರ್ ಮಿಸ್ಟರಿಯ ಫ್ಲೇವರ್ ಅಂಟಿಕೊಂಡಿರುವುದೇ ಈ ಚಿತ್ರದ ಅಸಲೀ ವೈಶಿಷ್ಟ್ಯ.

ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ವೆನಿಲ್ಲಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನುವ ನಿರೀಕ್ಷೆಯಲ್ಲಿದ್ದಾರೆ. ಜಯತೀರ್ಥ ಹೊಸೆದಿರುವ ಈ ಥ್ರಿಲ್ಲರ್ ಕಥಾನಕವನ್ನು ಕಣ್ತುಂಬಿಕೊಳ್ಳಲು ಇನ್ನೊಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ.

ಒಂದು ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಸೆಣೆಸಾಡುವ ಹೀರೋ. ಇದ್ದಕ್ಕಿದ್ದಂತೆ ನಾಪತ್ತೆಯಾಗೋ ನಾಯಕಿಗೆ ಅಪರೂಪದಲ್ಲೇ ಅಪರೂಪವಾದ ಮಾರಣಾಂತಿಕ ಅಡೇನೋ ಕಾಪ್ನೋಫೋಬಿಯಾ ಕಾಯಿಲೆ… ಇಂಥಾ ಭಿನ್ನವಾದ ಕಥಾ ಹಂದರ ಪ್ರೇಕ್ಷಕರನ್ನು ಸೆಳೆದುಕೊಳ್ಳದಿರಲು ಸಾಧ್ಯವೇ?

ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ ಎಂಬ ಭರವಸೆ ಹೊಂದಿರೋ ಚಿತ್ರ ತಂಡ ಡಿಫರೆಂಟಾದ ವೆನಿಲ್ಲಾ ಫ್ಲೇವರಿಗೆ ಪ್ರೇಕ್ಷಕರು ಫಿದಾ ಆಗುವ ಭರವಸೆ ಹೊಂದಿದೆ!

ಈ ಹಿಂದೆ ಸಿನಿಮಾದ ಆಡಿಯೋ ರಿಲೀಸ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿನಿಮಾ ಮತ್ತು ಕಲಾವಿದರಿಗೆ ಶುಭ ಕೋರಿದ್ದರು. ನನಗೆ ಮೊದಲು ಬಣ್ಣ ಹಚ್ಚಿದ ಗುರು ಮಂಡ್ಯ ರಮೇಶ್. ಈಗ ಅವರ ಗರಡಿಯಲ್ಲೇ ಬೆಳೆದ ಅವಿನಾಶ್ ಈ ಚಿತ್ರದ ನಾಯಕ. ಆತ ಕೂಡ ನಾಯಕ ನಟನಾಗಿ ಪರಿಚಯ ಆಗುತ್ತಿರೋದು ನನಗೆ ನಿಜಕ್ಕೂ ಸಂತಸ ತಂದಿದೆ.ಪ್ರತಿ ಸಿನಿಮಾದಲ್ಲೂ ನಾನು ಹೊಸಬ ಅಂತಾನೇ ಕೆಲಸದಲ್ಲಿ ಮಗ್ನರಾಗಬೇಕಿರೋದು ಬಹಳ ಮುಖ್ಯ ಎಂದು ಹೊಸ ನಟರಿಗೆ ದರ್ಶನ್ ಕಿವಿಮಾತು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *