ಭರ್ಜರಿ ಪ್ರದರ್ಶನ ಕಾಣುತ್ತಿದೆ ರತ್ನಮಂಜರಿ!

Public TV
1 Min Read

ಬೆಂಗಳೂರು: ಹೊಸಬರ ತಂಡವೊಂದು ಸೇರಿಕೊಂಡು ಯಾವ ಚಿತ್ರ ಮಾಡಿದರೂ ಅದರಲ್ಲೊಂದು ಹೊಸತನ ಇದ್ದೇ ಇರುತ್ತದೆಂಬುದು ಪ್ರೇಕ್ಷಕರಲ್ಲಿರೋ ನಂಬಿಕೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ತೆರೆ ಕಂಡಿರೋ ಪ್ರಸಿದ್ಧ್ ನಿರ್ದೇಶನದ ರತ್ನಮಂಜರಿ ಕೂಡಾ ಆ ನಂಬಿಕೆಯನ್ನು ನಿಜವಾಗಿಸಿದೆ. ಭರಪೂರವಾಗಿಯೇ ಓಪನಿಂಗ್ ಪಡೆದುಕೊಂಡಿದ್ದ ಈ ಚಿತ್ರವೀಗ ಎಲ್ಲೆಡೆ ಭರ್ಜರಿ ಪ್ರದರ್ಶನ ಪಡೆಯುತ್ತಾ ಮುಂದುವರೆಯುತ್ತಿದೆ.

ಇದು ಅನಿವಾಸಿ ಕನ್ನಡಿಗರೇ ಸೇರಿ ನಿರ್ಮಾಣ ಮಾಡಿರೋ ಚಿತ್ರ. ಸಂದೀಪ್, ನಟರಾಜ್ ಹಳೇಬೀಡು ಮತ್ತು ಡಾ. ನವೀನ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ನಿರ್ಮಾಣಗೊಂಡಿದ್ದರ ಹಿಂದೆ ಹಲವಾರು ವರ್ಷಗಳ ಶ್ರಮ ಮತ್ತು ತಯಾರಿಗಳಿವೆ. ಹೀಗೆ ಕನ್ನಡಕ್ಕೆ ಒಂದೊಳ್ಳೆ ಚಿತ್ರವನ್ನು ಕೊಡಬೇಕೆಂಬ ಆಕಾಂಕ್ಷೆಯಿಂದಲೇ ಅಣಿಗೊಂಡಿದ್ದ ರತ್ನಮಂಜರಿಯನ್ನು ಜನ ಎಂಜಾಯ್ ಮಾಡಲಾರಂಭಿಸಿದ್ದಾರೆ. ಯಾವುದೇ ಚಿತ್ರವಾದರೂ ನೋಡುಗರ ಬಾಯಿಂದ ಬಾಯಿಗೆ ಹರಡೋ ಒಳ್ಳೆ ಮಾತುಗಳೇ ಚಿತ್ರ ಮಂದಿರವನ್ನು ಭರ್ತಿಯಾಗಿಸುತ್ತವೆ. ರತ್ನಮಂಜರಿ ಕೂಡಾ ಅಂಥಾದ್ದೇ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲ ದಿಕ್ಕಿನಿಂದಲೂ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿರೋದರಿಂದ ರತ್ನಮಂಜರಿ ಗೆಲುವಿನತ್ತ ದಾಪುಗಾಲಿಡುತ್ತಿದೆ.

ಈ ಚಿತ್ರದಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ಬೆರಗಾಗಿಸುವಂಥಾ, ಇಷ್ಟವಾಗುವಂತಾ ಕಥೆಯಿದೆ. ಒಂದಿನಿತೂ ಬೋರು ಹೊಡೆಸದೇ ನೋಡಿಸಿಕೊಂಡು ಹೋಗುವ ನಾಜೂಕಿನ ನಿರೂಪಣೆಯಿದೆ. ಉತ್ಕೃಷ್ಟ ಮಟ್ಟದ ತಾಂತ್ರಿಕ ಶ್ರೀಮಂತಿಕೆ ಮತ್ತು ಕಣ್ಣಿಗೆ ಹಬ್ಬದಂಥಾ ದೃಶ್ಯವೈಭವಗಳನ್ನು ಖಂಡಿತಾ ಕನ್ನಡದ ಪ್ರೇಕ್ಷಕರು ಮಿಸ್ ಮಾಡಿಕೊಳ್ಳಬಾರದು.

ಅಮೆರಿಕಾದ ಕಾರ್ಪೋರೇಟ್ ಜಗತ್ತಿನ ಆಸುಪಾಸಿನಲ್ಲಿಯೇ ನಡೆಯುವ ಒಂದು ಕೊಲೆ ಮತ್ತು ಅದು ಕೊಡಗಿನತ್ತ ಹೊರಳಿಕೊಂಡು ಇಲ್ಲಿನ ಪ್ರಾಕೃತಿಕ ಶ್ರೀಮಂತಿಕೆಯ ನಡುವೆ ನಿಗೂಢವಾಗಿ ಸಾಗೋ ಕಥಾ ಹಂದರ ಈ ಚಿತ್ರದ್ದು. ಪ್ರತೀ ಕ್ಷಣವೂ ಮುಂದೇನಾಗುತ್ತದೆ ಎಂಬ ಕುತೂಹಲ ಕಾಯ್ದಿಟ್ಟುಕೊಳ್ಳುತ್ತಲೇ ಕಡೆಯವರೆಗೂ ತುದಿ ಸೀಟಲ್ಲಿ ಕೂತು ನೋಡುವಂತೆ ಮಾಡೋ ರತ್ನಮಂಜರಿ ಖಂಡಿತವಾಗಿಯೂ ಎಲ್ಲರೂ ಒಂದು ಸಲ ನೋಡಲೇಬೇಕಾದ ಚಿತ್ರ.

Share This Article
Leave a Comment

Leave a Reply

Your email address will not be published. Required fields are marked *