ಕನ್ನಡಕ್ಕಾಗಿ ಒಂದನ್ನು ಒತ್ತಿ – ಅಕ್ಷರಗಳನ್ನು ಅಪ್ಪಿಕೊಂಡವನ ಪ್ರೇಮ ವಿಯೋಗ!

Public TV
1 Min Read

ಬೆಂಗಳೂರು : ಪ್ರೀತಿಯೆಂಬೋ ಕಥಾ ವಸ್ತುವನ್ನು ಅದೆಷ್ಟು ಆಂಗಲ್ಲಿಂದ ಬಳಸಿಕೊಂಡರೂ ಅದರ ವ್ಯಾಲಿಡಿಟಿ ಮುಗಿಯುವಂಥಾದ್ದಲ್ಲ. ಒಂದೇ ಥರದ ಪ್ರೀತಿ… ವೆರೈಟಿ ವೆರೈಟಿ ವಿರಹ… ಇದರ ಮತ್ತೊಂದು ತೀವ್ರವಾದ ರೂಪದಲ್ಲಿ ತೆರೆ ಕಂಡಿರೋ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ಕೆಲವೊಂದಷ್ಟು ಕೊರತೆ ಮತ್ತು ಖಂಡುಗ ಖಂಡುಗ ಭಾವತೀವ್ರತೆಯೊಂದಿಗೆ ತೆರೆ ಕಂಡಿರುವ ಈ ಚಿತ್ರ ಹಳೇ ಪ್ರೇಮಕಾವ್ಯವ ಹೊಸತೊಂದು ಪುಟದಂತೆ ಪ್ರೇಕ್ಷಕರ ಎದೆಗಿಳಿದಿದೆ.

ಎಂಎ ಮಾಡಿಕೊಂಡಿದ್ದರೂ ಹೊಟೇಲೊಂದರಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ನಾಯಕ. ಇಲ್ಲಿಯೇ ಈತನ ಕನ್ನಡ ಜ್ಞಾನ ಮತ್ತು ಸಾಹಿತ್ಯಾಸಕ್ತಿಯನ್ನು ಮನಗಂಡು ಹಳೇ ಪತ್ರಿಕೆಯ ಸಂಪಾದಕರೋರ್ವರು ತಮ್ಮ ಪತ್ರಿಕೆಯಲ್ಲಿ ಬರೆಯೋ ಅವಕಾಶ ಕೊಡುತ್ತಾರೆ. ಅಲ್ಲಿಂದ ಪತ್ರಿಕೋದ್ಯಮಕ್ಕೆ ಅಡಿಯಿರಿಸಿದವನೊಳಗೆ ಅದಾಗಲೇ ಹುಟ್ಟಿಕೊಂಡಿದ್ದ ಪ್ರೀತಿ ತೀವ್ರವಾಗಿ ಹೋಗುತ್ತದೆ. ಆದರೆ ಇನ್ನೇನು ಪಳಗಿಕೊಂಡ ಪ್ರೀತಿ ಕೈಗೆಟುಕುತ್ತದೆ ಎಂಬಷ್ಟರಲ್ಲಿ ಮೊಬೈಲ್ ಆಫ್ ಆಗೋದರೊಂದಿಗೆ ಎಲ್ಲವೂ ಅದಲು ಬದಲಾಗುತ್ತೆ.

ಈ ಪ್ರೀತಿಯನ್ನು ತೀವ್ರವಾಗಿ ಹಚ್ಚಿಕೊಂಡು ಅದು ಕೈ ತಪ್ಪಿದಾಗ ಮಾಮೂಲಿ ಪ್ರೇಮಿಗಳಂತೆಯೇ ನಖಶಿಖಾಂತ ಕಂಗಾಲಾಗಿ ಕೂತಿದ್ದ ಆತನಿಗೆ ಬಾಲ್ಯ ಸ್ನೇಹಿತರಿಬ್ಬರು ಜೊತೆಯಾಗುತ್ತಾರೆ. ಅಲ್ಲಿ ಅವರವರ ವಿಫಲ ಪ್ರೇಮ ಕಥಾನಕಗಳೂ ಬಿಚ್ಚಿಕೊಳ್ಳುತ್ತವೆ. ಈ ಮೂವರದ್ದೂ ಕಥೆ ಬೇರೆ, ವ್ಯಥೆ ಒಂದೇ.

ಇಂಥಾ ಕಥಾ ವಸ್ತುವನ್ನು ನಿರ್ದೇಶಕ ಕುಶಾಲ್ ಇನ್ನೂ ಒಂದಷ್ಟು ಶ್ರಮ ವಹಿಸಿ ಹ್ಯಾಂಡಲ್ ಮಾಡಿದ್ದರೆ ಅದರ ರುಚಿಯೇ ಬೇರೆಯದ್ದಿರುತ್ತಿತ್ತು. ಆದರೂ ಅವರು ನಿರೂಪಣೆಯಲ್ಲಿ ಹೊಸತನ ಕಾಯ್ದುಕೊಂಡಿದ್ದಾರೆ. ಅಲ್ಲಲ್ಲಿ ಕೊಂಚ ಪೇಲವ ಅನ್ನಿಸಿದರೂ ಪ್ರೇಕ್ಷಕರಿಗೆ ಹೊಸಾದೊಂದು ಭಾವ ಹುಟ್ಟಿಸುವಲ್ಲಿಯೂ ಅವರು ಸಫಲರಾಗಿದ್ದಾರೆ.

ಈ ಹಿಂದೆ ದಯವಿಟ್ಟು ಗಮನಿಸಿ ಚಿತ್ರದಲ್ಲಿ ನಟಿಸಿದ್ದ ಅವಿನಾಶ್ ಗೆ ಇಲ್ಲಿಯೂ ಬೇರೆಯದ್ದೇ ಪಾತ್ರ ಸಿಕ್ಕಿದೆ. ನಾಯಕನಗಿ ಅವರದ್ದು ಪ್ರಾಮಾಣಿಕ ಪ್ರಯತ್ನ. ನಾಯಕನ ಸ್ನೇಹಿತರಾಗಿ ನಟಿಸಿರುವ ಚಿಕ್ಕಣ್ಣ ಮತ್ತು ಶಠಮರ್ಷಣ ಅವಿನಾಶ್ ಗಮನ ಸೆಳೆಯುತ್ತಾರೆ. ನಾಯಕಿ ಕೃಷಿ ತಾಪಂಡ ಗ್ಲಾಮರಸ್ ಆಗಿಯೂ ನಟನೆಯಲ್ಲಿಯೂ ಆವರಿಸಿಕೊಳ್ಳುತ್ತಾಳೆ.

ಇಂಥಾದ್ದೊಂದು ಕಮರ್ಷಿಯಲ್ ವೆರೈಟಿಯ ಪ್ರೇಮ ಕಥೆಯಲ್ಲಿಯೂ ನಾಯಕನನ್ನು ಪುಸ್ತಕ ಪ್ರೇಮಿಯಾಗಿ ತೋರಿಸುತ್ತಲೇ ಕೆಲವಾರು ಸೆನ್ಸಿಟಿವ್ ಅಂಶಗಳತ್ತ ಫೋಕಸ್ ಮಾಡಿರೋದು ನಿರ್ದೇಶಕರ ಸೂಕ್ಷ್ಮವಂತಿಕೆಗೆ ಸಾಕ್ಷಿ. ಛಾಯಾಗ್ರಹಣ ಸೇರಿದಂತೆ ಎಲ್ಲವೂ ಕಥೆಗೆ ಸಾಥ್ ನೀಡಿವೆ.

Share This Article
Leave a Comment

Leave a Reply

Your email address will not be published. Required fields are marked *