ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

Public TV
1 Min Read

ಬೆಂಗಳೂರು: ಅನಂತ ನಾಗ್ ಸ್ಯಾಂಡಲ್‍ವುಡ್ ಕಂಡ ಮೇರು ಕಲಾವಿದ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಅನಂತನಾಗ್ ಹೊಂದಿದ್ದಾರೆ. ಹಿಂದೆಯೆಲ್ಲಾ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತನಾಗ್ ಇಂದು ಪೋಷಕ ಪಾತ್ರಗಳಿಗೆ ತಮ್ಮ ಅನುಭವದ ಮೂಲಕ ಜೀವ ತುಂಬುತ್ತಿದ್ದಾರೆ. ಕಥೆಯನ್ನು ನೋಡಿ ಒಪ್ಪಿಕೊಳ್ಳುವ ಅನಂತನಾಗ್ ಇಂದಿಗೂ ತಮ್ಮ ಅಮೋಘ ನಟನೆಯ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ.

ಸದ್ಯ ನರೇಂದ್ರ ಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ವಿಶೇಷ ಸಿನಿಮಾದ ಮೂಲಕ ತೆರೆಯ ಮೇಲೆ ಬರಲಿದ್ದಾರೆ. ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಪ್ರಯೋಗಾತ್ಮಕ ಸಿನಿಮಾ ನೀಡಿದ್ದ ನರೇಂದ್ರ ಬಾಬು ಅವರ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.

ಸ್ವಂತ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿಗೆ ಅನಿವಾರ್ಯ ಕಾರಣಗಳಿಂದಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಪರಿಸ್ಥಿತಿ ಅನುಗುಣವಾಗಿ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಬೇರೆ ವ್ಯಕ್ತಿಯ ಕೆಳಗೆ ಕೆಲಸ ಮಾಡಲು ಮುಂದಾಗುತ್ತಾರೆ. ಕಂಪೆನಿಯಲ್ಲಿ ಕೆಲಸ ಮಾಡುವ ಯಂಗ್ ಜನರೇಷನ್‍ನ್ನು ಎದುರಿಸುವ ಪ್ರಸಂಗ ಬರುತ್ತದೆ. ಈ ಎಲ್ಲ ತಳಮಳ, ಒತ್ತಡ, ಸವಾಲುಗಳನ್ನು ಕಥಾ ನಾಯಕ ಹೇಗೆ ಎದುರಿಸುತ್ತಾನೆ ಎಂಬುವುದು ಚಿತ್ರದ ತಿರುಳು.

ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಮಿತಾ ಪಾಟೀಲ್, ಅನಿಲ್ ಹುಲಿಯಾ, ಸಂದೀಪ್ ಅರಸ್ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಜನ್ ಲೋಕದ ಧೃವತಾರೆ ಗೀತಾಂಜಲಿ ರೈ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಹಿಂದೂಸ್ಥಾನಿ ಗಾಯಕ ರಾಮಚಂದ್ರ ಹಡಪದ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದು, ರೇಬಿನ್ ಬ್ರದರ್‍ಹುಡ್ ಹಿನ್ನೆಲೆ ಸಂಗೀತವನ್ನು ಹೊಂದಿದೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ಹರೀಶ್ ಶೇರಿಗಾರ್, ರಾಮಮೂರ್ತಿ ಮತ್ತು ಸುದರ್ಶನ್ ಜೊತೆಯಾಗಿ ಬಂಡವಾಳ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *