‘ಭರತ ಬಾಹುಬಲಿ’ ನೋಡಿದ್ರೆ ಒಂದು ಕೋಟಿ ರೂಪಾಯಿ ಸಿಗುತ್ತೆ!

Public TV
2 Min Read

ಮಾಸ್ಟರ್ ಪೀಸ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟ ಮಂಜು ಮಾಂಡವ್ಯ ನಟನಾಗಿ ಬರ್ತಾ ಇರೋದು ಎಲ್ಲರಿಗೂ ಗೊತ್ತೆ ಇದೆ. ನಿರ್ದೇಶನದಿಂದ ಬಡ್ತಿ ಪಡೆದು ‘ಶ್ರೀ ಭರತ ಬಾಹುಬಲಿ’ಯಾಗಿ ಕಂಗೊಳಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ತೆರೆಗೆ ಬರಲು ಸಿದ್ಧತೆ ನಡೆಸಿದೆ. ಇದೇ ತಿಂಗಳು 17ರಂದು ಚಿತ್ರಮಂದಿರಕ್ಕೆ ‘ಭರತ ಬಾಹುಬಲಿ’ ಅಬ್ಬರಿಸಲಿದ್ದಾನೆ.

ಸಿನಿಮಾ ಮಾಡೋದು ಎಷ್ಟು ಕಷ್ಟನೋ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ಅಷ್ಟೇ ಕಷ್ಟ. ಹೀಗಾಗಿ ಎಲ್ಲಾ ಸಿನಿಮಾಗಳ ನಡುವೆ ‘ಭರತ ಬಾಹುಬಲಿ’ಯನ್ನು ನೋಡುವಂತೆ ಮಾಡಲು, ಚಿತ್ರತಂಡ ಹೊಸ ಪ್ಲಾನ್ ಒಂದನ್ನು ಹೆಣೆದಿದೆ. ಈ ಸಿನಿಮಾ ನೋಡುಗರಿಗೆ  ಒಂದು ಕೋಟಿ ರೂಪಾಯಿ ಮೊತ್ತದ ಬಹುಮಾನವನ್ನು ಘೋಷಿಸಿದೆ. ಬಹುಮಾನದಲ್ಲಿ 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳನ್ನು ಚಿತ್ರತಂಡ ಘೋಷಿಸಿದೆ. 20 ಜನ ಅದೃಷ್ಟವಂತ ಪ್ರೇಕ್ಷಕರಿಗೆ ಈ ಬಹುಮಾನ ಸಿಗಲಿದೆ.

ಬಹುಮಾನ ಗೆಲ್ಲಬೇಕೆಂಬ ಪ್ರೇಕ್ಷಕರು ಮಾಡಬೇಕಾಗಿರುವುದು ಇಷ್ಟೇ, ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಾದರೂ ‘ಭರತ ಬಾಹುಬಲಿ’ ಚಿತ್ರವನ್ನು ನೋಡಿ. ಈ ವೇಳೆ ಚಿತ್ರತಂಡ ಸಿನಿಮಾ ಟಿಕೆಟ್ ಜೊತೆಗೆ ನೀಡಲಾಗುವ ಕೂಪನ್ ಜೊತೆಗಿಟ್ಟುಕೊಂಡರೆ ಸಾಕು. ಚಿತ್ರ ತಂಡವು ಲಕ್ಕಿ ಪಿಕ್ ನಲ್ಲಿ 20 ಜನ ಅದೃಷ್ಟವಂತರನ್ನು ಆಯ್ಕೆ ಮಾಡಿ ನಂಬರ್ ಘೋಷಿಸುತ್ತದೆ. ಬಳಿಕ ಕಾರು ಹಾಗೂ ಆಭರಣಗಳನ್ನು ಅದೃಷ್ಟವಂತ ಪ್ರೇಕ್ಷಕರಿಗೆ ನೀಡಲಾಗುತ್ತದೆ.

ಭರತ ಬಾಹುಬಲಿಗಾಗಿ ಈಗಾಗಲೇ ಕೋಟಿ ಕೋಟಿ ಹಣ ಖರ್ಚಾಗಿದೆ. ಪ್ರೇಕ್ಷಕರನ್ನು ಕರೆತರಲು ಮತ್ತೆ ನಿರ್ಮಾಪಕರಾದ ಟಿ. ಶಿವಪ್ರಕಾಶ್ ಕೋಟಿ ಹಣ ಖರ್ಚು ಮಾಡಲು ಮುಂದಾಗಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು, ಇಂತದ್ದೊಂದು ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ, ಖುಷಿ ಪಡಲಿ ಅನ್ನೋದು ನನ್ನ ಉದ್ದೇಶ. ಒಳ್ಳೆ ಸಿನಿಮಾವನ್ನ ಜನ ಮಿಸ್ ಮಾಡಿಕೊಳ್ಳಬಾರದಲ್ವಾ ಅನ್ನೋದು ನಿರ್ಮಾಪಕರ ಮಾತು

ಈಗಾಗಲೇ ಸಿನಿಮಾ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿರುವ ಹಾಡು, ಟ್ರೈಲರ್ ನೋಡಿದ್ರೇನೆ ಸಿನಿಮಾದ ಕ್ವಾಲಿಟಿ ಗೊತ್ತಾಗುತ್ತೆ. ಟ್ರೈಲರ್ ನೋಡಿದರವರಿಗೆ ಸಿನಿಮಾದ ಮೇಲೆ ಮತ್ತಷ್ಟು ಭರವಸೆ ಹೆಚ್ಚಾಗಿದೆ. ಜನವರಿ 17ರಂದು ಎಲ್ಲಾ ಥಿಯೇಟರ್ ಗೆ ಲಗ್ಗೆ ಇಡ್ತಾ ಇದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ, ನೀವೂ ಆ ಅದೃಷ್ಟವಂತರಲ್ಲಿ ಒಬ್ಬರಾದ್ರೂ ಆಗಬಹುದು.

Share This Article
Leave a Comment

Leave a Reply

Your email address will not be published. Required fields are marked *