ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

Public TV
2 Min Read

ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.

ಕಲಬುರಗಿ ನಗರದ ನಿವಾಸಿ ಆಗಿರುವ ಡಾ. ಅಮಿತ್ ಗಾಯಾಕವಾಡ್ ಬಂಧನವಾದ ವ್ಯಕ್ತಿಯಾಗಿದ್ದು, ಆರೋಪಿ ಅಮಿತ್ ಬೆಳಗಾವಿಯ ಬಿಐಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ.

ಕಳೆದ ಒಂದು ವಾರದಿಂದ ನಗರದಲ್ಲಿ ಕಾರಿನ ಮೇಲೆ ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಘಟನೆಯನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಆದರೂ ನಗರದಿಂದ ತಪ್ಪಿಸಿಕೊಂಡು ಹೋಗಿದ್ದ ಅಮಿತ್‍ನನ್ನು ಕಲಬುರಗಿ ಪೊಲೀಸರ ಮಾಹಿತಿ ಮೇರೆಗೆ ಬೆಳಗಾವಿ ನಗರದಲ್ಲಿ ಬಂಧಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ: ಕಲಬುರಗಿ ನಗರದ ಖುಬಾ ಪ್ಲಾಟ್ ನಲ್ಲಿ ಕಾರ್ ಗೆ ಬೆಂಕಿ ಹಚ್ಚುವ ಸಂರ್ಭದಲ್ಲಿ ಕಾರ್ ಮಾಲೀಕರು ಆರೋಪಿಯನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಹೆಲ್ಮೆಟ್ ಧರಿಸಿದ್ದ ಇದರಿಂದ ಅನುಮಾನಗೊಂಡ ಅವರು ಆತನನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ವಾಗಿ ಆರೋಪಿ ನಾನು ಮನೆಯ ಮಾಲೀಕರಾದ ಡಿಸೋಜಾ ಅವರನ್ನು ಭೇಟಿ ಮಾಡಲು ಬಂದಿದೆ ಎಂದು ತಿಳಿಸಿದ್ದ. ಆದರೆ ಡಿಸೋಜಾ ಅವರು ಮೃತಪಟ್ಟು ಹಲವು ದಿನಗಳಾಗಿದ್ದವು. ನಂತರ ಆರೋಪಿ ಮುಖದ ಮೇಲಿನ ಹೆಲ್ಮೆಟ್ ತೆಗಿಸಿ ಪ್ರಶ್ನಿಸಿದ್ದರು. ಆದರೆ ಈ ವೇಳೆ ಅವರಿಗೆ ಬೇರೆ ಮಾಹಿತಿ ನೀಡಿ ಆರೋಪಿ ಅಲ್ಲಿಂದ ಎಸ್ಕೆಪ್ ಆಗಿದ್ದ. ಈ ಘಟನೆ ಕುರಿತು ಕಾರ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿಯ ಬೆನ್ನಟ್ಟಿದ್ದ ಪೊಲೀಸರಿಗೆ ಬೆಳಗಾವಿ ನಗರದ ವಿವೇಂತಾ ಆರ್ಪಾಟ್ ಮೆಂಟ್ ನಲ್ಲಿ ಇಂತಹದೇ ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿ ಬಿದ್ದಿರುವ ಮಾಹಿತಿ ಲಭಿಸಿಸುತ್ತದೆ. ಬಂಧಿತ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಅಮಿತ್ ಬೆಳಗಾವಿಯ ಸದಾಶಿವ ನಗರದಲ್ಲಿ ವಾಸಿಸುತ್ತಿದ್ದು, ಆತನ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಪತ್ತೆಯಾಗಿದೆ. ಪ್ರಸ್ತುತ ಆರೋಪಿ ಅಮಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಆರೋಪಿ ಕಲಬುರಗಿ ನಗರದ ಸೇಡಂ ರಸ್ತೆಯ ಜಯನಗರದ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಅಲ್ಲದೇ ಈ ಘಟನೆಯ ಮರುದಿನವೇ ಆರೋಪಿ ಮತ್ತೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಖೂಬಾ ಪ್ಲಾಟ್ ನಲ್ಲಿ ಹುಂಡೈ ಕಂಪೆನಿ ಕಾರ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಪದೇ ಪದೇ ಕಾರುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳಿಂದ ಕಂಗಲಾಗಿದ್ದ ಕಲಬುರಗಿ ನಗರದ ಕಾರು ಮಾಲೀಕರು, ತಮ್ಮ ಕಾರುಗಳ ರಕ್ಷಣೆಗಾಗಿ ಮನೆ ಬಿಟ್ಟು ಕಾರಿನಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅರೋಪಿಯ ಪತ್ತೆಗಾಗಿ ಜಿಲ್ಲೆಯ ಎ ಡಿವಿಷನ್ ಡಿಎಸ್‍ಎಸ್ಪಿ ಲೊಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅಲ್ಲದೇ ಆರೋಪಿ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದರು.

https://www.youtube.com/watch?v=PWHq6BC0Dho

Share This Article
Leave a Comment

Leave a Reply

Your email address will not be published. Required fields are marked *