ಮದ್ವೆಯಾಗೋದಾಗಿ ನಂಬಿಸಿ ಗರ್ಭಿಣಿ ಮಾಡಿ ಎಂಬಿಎ ಪದವೀಧರ ವಂಚನೆ

Public TV
2 Min Read

ಕಲಬುರಗಿ: ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎಂಬ ಹಾಡು ಕಲಬುರಗಿಯ ಯುವತಿಗೆ ಸೂಟ್ ಆಗುತ್ತೆ. ಯಾಕೆಂದರೆ ಪ್ರೀತಿ ಮಾಡುವುದಾಗಿ ನಾಟಕವಾಡಿದ ಪಕ್ಕದ ಮನೆ ಹುಡುಗ ಆಕೆಯ ಜೊತೆ ಸರಸ ಸಲ್ಲಾಪ ಆಡಿ ಇದೀಗ ಕೈ ಕೊಟ್ಟಿದ್ದಾನೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಿವಾಸಿ ಯುವತಿಯನ್ನು ಮನೆ ಪಕ್ಕದ ವಿಶಾಲ್ ಚೌವ್ಹಾಣ್ ಎಂಬ ಯುವಕ 10 ವರ್ಷಗಳಿಂದ ಪ್ರೀತಿಸಿ ಪಟಾಯಿಸಿದ್ದಾನೆ. ನಂತರ ಆಕೆಯನ್ನು ದೈಹಿಕವಾಗಿ ಸಹ ಹಲವು ಬಾರಿ ಉಪಯೋಗಿಸಿಕೊಂಡು ಇದೀಗ ಬೇರೆ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ. ಈ ಬಗ್ಗೆ ಯುವತಿ ವಿಶಾಲ್ ಪೊಷಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದ ಯುವತಿ ನಯವಂಚಕ ವಿಶಾಲ್ ವಿರುದ್ಧ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೂಡಲೇ ಪೊಲೀಸರು ಅಲ್ಲಿಯೇ ಇರುವ ಬಸವೇಶ್ವರ ವೃತದಲ್ಲಿ ಇಬ್ಬರನ್ನೂ ಮದುವೆ ಮಾಡಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಮದುವೆಯಾದ ಎರಡೇ ದಿನಕ್ಕೆ ವಿಶಾಲ್ ಆಕೆಗೆ ಕೈ ಕೊಟ್ಟು ಪರಾರಿಯಾಗಿದ್ದಾನೆ ಎಂದು ನೊಂದ ಯುವತಿ ದೂರಿದ್ದಾರೆ.

ಈ ಹಿಂದೆ ಯುವತಿ ಮತ್ತು ವಿಶಾಲ್ ಇಬ್ಬರೂ ಎಂಬಿಎ ಪದವಿಧರರಾಗಿದ್ದು, ಪುಣೆಯಲ್ಲಿ ಕೆಲಸ ಮಾಡಲು ಹೋದಾಗ ದೈಹಿಕ ಸಂಪರ್ಕ ಬೆಳೆಸಿದ ಕಾಮುಕ ವಿಶಾಲ್, ಎರಡು ಬಾರಿ ಯುವತಿಯನ್ನು ಗರ್ಭಣಿ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಪುಣೆಯ ವೈದ್ಯ ಡಾ.ರಮೇಶ್ ಯುವತಿಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಇಷ್ಟೆಲ್ಲ ಆದರೂ ಸಹಿಸಿಕೊಂಡ ಯುವತಿಗೆ ಈ ನಯವಂಚಕ ವಿಶಾಲ್ ಇದೀಗ ಕೈ ಕೊಟ್ಟಿದ್ದಾನೆ.

ಈ ಬಗ್ಗೆ ವಾಡಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ನಾವು ಮದುವೆ ಮಾಡಿದ್ದೇವೆ. ನಮ್ಮ ಕೆಲಸ ಮುಗಿಯಿತು ಎಂದು ಹೇಳಿ ಯುವತಿಗೆ ಹಾರಿಕೆಯ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನ್ಯಾಯ ಕೊಡಿ ಇಲ್ಲ ವಿಷ ಕೊಡಿ ಎಂದು ಯುವತಿ ಈಶಾನ್ಯ ವಲಯ ಐಜಿಪಿ ಮುರುಘನ್ ಮೋರೆ ಹೋಗಿದ್ದಾರೆ.

ಹೀಗೆ ಯುವತಿಯರ ಜೊತೆ ಪ್ರೀತಿಸಿ ಲವ್ ಸೆಕ್ಸ್ ಮಾಡಿ ದೋಖಾ ಮಾಡುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಯುವತಿಯರು ಪ್ರೀತಿಯ ಮಾಯದ ಬಲೆಗೆ ಬಿಳುವ ಮುನ್ನ ಹುಷಾರಾಗಿರಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *