ಕಲಬುರಗಿ: ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಹಳ್ಳಿಯ ಯುವಕರು ನಗರದತ್ತ ಮುಖ ಮಾಡಿ ಕೃಷಿ ಕಾಯಕವನ್ನು ಬಿಡುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ 91ರ ಅಜ್ಜ ಇಂದಿಗೂ ಕೃಷಿ ಮಾಡುತ್ತ ಅಂತಹ ಯುವಕರಿಗೇ ಮಾದರಿಯಾಗಿದ್ದಾರೆ.
ಹೌದು, ಕಲಬುರಗಿ ತಾಲೂಕಿನ ಧರ್ಮಾಪುರ ಗ್ರಾಮದ ಬಸವಣ್ಣೆಪ್ಪ ಎಂಬ 91ರ ವೃದ್ಧ ಅಜ್ಜ ಈ ಇಳಿವಯಸ್ಸಿನಲ್ಲಿ ಸಹ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇವರು ಕಳೆದ 7 ದಶಕಗಳಿಂದ ಕೃಷಿಯಲ್ಲಿಯೇ ತಮ್ಮ ಜೀವನ ಕಳೆಯುತ್ತಿದ್ದು, ಬೆಳಗ್ಗೆ 6 ಗಂಟೆಯಾದರೆ ಸಾಕು ಇವರು ತಮ್ಮ ಜಮೀನಿನಲ್ಲಿ ಕೂಲಿಕಾರರನ್ನು ನಂಬದೇ ಸ್ವತಃ ಜಮೀನಿನಲ್ಲಿ ಉಳುಮೆ, ಬಿತ್ತನೆ ಸೇರಿದಂತೆ ಎಲ್ಲಾ ಕೆಲಸವನ್ನು ಖುದ್ದು ಅವರೇ ಮಾಡುತ್ತಿದ್ದಾರೆ.
ಈ ಅಜ್ಜ ಪ್ರಾಚೀನ ಕೃಷಿಗೆ ಜೋತು ಬಿಳದೆ ವೈಜ್ಞಾನಿಕವಾಗಿ ಬೇಸಾಯ ಮಾಡುವ ಮಾದರಿ ರೈತರಾಗಿದ್ದಾರೆ. ಜೀವನ ಪೂರ್ತಿ ಕೂತುಂಡರೂ ಕರಗದಷ್ಟು ಆಸ್ತಿಯನ್ನು ಬಸವಣ್ಣೆಪ್ಪ ಮಾಡಿದ್ದರೂ, ತಮ್ಮ ಕೃಷಿ ಕಾಯಕ ಮಾತ್ರ ಬಿಟ್ಟಿಲ್ಲ. ಈ ಕೃಷಿ ಮೂಲಕವೇ ತಮ್ಮ 6 ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಯನ್ನು ಮಾಡಿದ್ದಾರೆ. ವಯಸ್ಸಾಯ್ತು ಕೃಷಿ ಸಾಕು ಎಂದು ಕುಟುಂಬಸ್ಥರು ಎಷ್ಟು ಹೇಳಿದರು ಕೇಳದ ಅಜ್ಜ ಬೆಳಗ್ಗೆ 6 ಗಂಟೆಗೆ ಬೈಕ್ ಮೇಲೆ ಜಮೀನಿಗೆ ಬಂದು ಕೃಷಿ ಕಾಯಕ ಮಾಡುವದು ಬಿಟ್ಟಿಲ್ಲ.
ಇಂದಿನ ದಿನಗಳಲ್ಲಿ ಫೇಸ್ ಬುಕ್, ಟಿಕ್ ಟಾಕ್ ಎಂದು ಕಾಲ ಕಳೆಯುವ ಸೋಮಾರಿ ಯುವಕರಿಗೆ ಬಸವಣ್ಣೆಪ್ಪ ನಿಜಕ್ಕೂ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ರಿಟೈರ್ಮೆಂಟ್ ಲೈಫ್ ಅನ್ನೋದು ಇರುತ್ತೆ. ಆದರೆ ದೇಶದ ಬೆನ್ನೆಲುಬು ಅನ್ನದಾತರಿಗೇ ನಿವೃತ್ತಿ ಅನ್ನೋದೇ ಇಲ್ಲ. ಇದಕ್ಕೆ ಈ 90ರ ವಯಸ್ಸಿನ ಅಜ್ಜ ತಾಜಾ ಉದಾಹರಣೆಯಾಗಿದ್ದಾರೆ.