ಚಾಮರಾಜನಗರ/ದಾವಣಗೆರೆ: ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಗಡಿನಾಡು ಚಾಮರಾಜನಗರ ಜಿಲ್ಲೆಯಾದ್ಯಂತ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಯಾಗಿಲ್ಲ.
ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ಸೇರಿದಂತೆ ತಾಲೂಕಿನ ಯಾವುದೇ ಚಿತ್ರ ಮಂದಿರಗಳಲ್ಲಿ ಕಾಳಾ ಚಿತ್ರ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೇ ಜಿಲ್ಲೆಯ ಯಾವುದೇ ಚಿತ್ರಮಂದಿರಗಳಲ್ಲಿ ಬೇರೆ ತಮಿಳು ಚಿತ್ರಗಳು ಸಹ ಪ್ರದರ್ಶನಗೊಳ್ಳುತ್ತಿಲ್ಲ.
ಹೀಗಾಗಿ ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳಲ್ಲಿ ಕನ್ನಡ ಮತ್ತು ತೆಲಗು ಚಿತ್ರಗಳೇ ಪ್ರದರ್ಶನಗೊಳ್ಳುತ್ತಿವೆ. ಚಾಮರಾಜನಗರ ಜಿಲ್ಲಾ ಕೇಂದ್ರದ ಸಿಂಹ ಮೂವೀ ಪ್ಯಾರಡೇಸ್, ಬಸವೇಶ್ವರ, ಭ್ರಮರಾಂಭ ಗುರುರಾಘವೇಂದ್ರ ಮತ್ತು ಸಿದ್ದಾರ್ಥ ಚಿತ್ರ ಮಂದಿಗಳಲ್ಲಿ ಕನ್ನಡ ಚಿತ್ರಗಳೇ ಪ್ರದರ್ಶನಗೊಳ್ಳುತ್ತಿವೆ.
ದಾವಣಗೆರೆಯಲ್ಲೂ ಕೂಡ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಥಿಯೇಟರ್ ಮಾಲೀಕರು ಕನ್ನಡಪರ ಸಂಘಟನೆಗಳ ಮನವಿ ಸ್ಪಂದಿಸಿದ್ದಾರೆ. ದಾವಣಗೆರೆಯ 2 ಚಿತ್ರಮಂದಿರಗಲ್ಲಿ ಕಾಳಾ ಚಿತ್ರ ಬಿಡುಗಡೆಗೆ ಕಾಲ ನಿಗದಿಯಾಗಿತ್ತು.
ಕಳೆದ ಒಂದು ವಾರದಿಂದ ಕರುನಾಡ ಸೇವಕರು ಮತ್ತು ಇತರೆ ಕನ್ನಡ ಪರ ಸಂಘಟನೆಗಳು ಥಿಯೇಟರ್ ಮಾಲೀಕರಿಗೆ ಮನವಿ ಮಾಡಿತ್ತು. ಒಂದು ವೇಳೆ ಬಿಡುಗಡೆ ಮಾಡಿದರೆ ಪರಿಣಾಮ ಎದುರಿಸಬೇಕಾಗತ್ತೆ ಎನ್ನುವ ಎಚ್ಚರಿಕೆ ನೀಡಿದ್ದರು. ಹಾಗಾಗಿ ಥಿಯೇಟರ್ ಮಾಲೀಕರು ಚಿತ್ರ ಬಿಡುಗಡೆ ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿರುವ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.