ತೇಜಸ್ವಿ ವಿರುದ್ಧದ ಮೀಟೂ ಆರೋಪದಲ್ಲಿ ದೋಸ್ತಿಗಳ ಕೈವಾಡ: ಈಶ್ವರಪ್ಪ

Public TV
2 Min Read

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಮೀಟೂ ಆರೋಪದ ಹಿಂದೆ ಕಾಂಗ್ರೆಸ್-ಜೆಡಿಎಸ್‍ನವರ ಕೈವಾಡವಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾಟಕ ಮಾಡಿ ಮೀಟೂ ಕೇಸ್‍ಗಳನ್ನು ಹಾಕಿಸುವುದು ಕಾಂಗ್ರೆಸ್ ಹಾಗೂ ಜೆಡಿಎಸ್‍ನವರಿಗೆ ಅಭ್ಯಾಸವಾಗಿದೆ. ಮೀಟೂ ವಿಷಯವನ್ನು ರಾಜಕೀಯವಾಗಿ ದುರುಯೋಗ ಪಡಿಸಿಕೊಳ್ಳಲಾಗುತ್ತಿದೆ. ಆದರೆ ಈ ಪ್ರಯತ್ನದಲ್ಲಿ ಅವರು ಸಂಪೂರ್ಣ ವಿಫಲರಾಗುತ್ತಾರೆ. ತೇಜಸ್ವಿ ಸೂರ್ಯ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆತ ಅಂಥ ಹುಡುಗನಲ್ಲ ಎಂದು ಹೇಳಿದರು.

ಅಧಿಕಾರಿಗಳ ವರ್ಗಾವಣೆ ಬಗ್ಗೆ ಸಿಎಂ ಕುಮಾರಸ್ವಾಮಿ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, ತಮಗೆ ಬೇಕಾದವರನ್ನು ಸರಿಯಾದ ಜಾಗಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಭ್ಯಾಸ ಕುಮಾರಸ್ವಾಮಿ ಅವರಿಗೆ ಇದೆ. ಚುನಾವಣೆ ಆಯೋಗ ಜಾರಿ ಮಾಡಿದ ಅಧಿಕಾರಿಗಳ ವರ್ಗಾವಣೆಯನ್ನು ಸಿಎಂ ಸ್ವಾಗತಿಸಬೇಕಿತ್ತು. ಆದರೆ ಹಾಗೇ ಮಾಡಲಿಲ್ಲ. ಅವರಿಗೆ ಬೇಕಾದ ಅಧಿಕಾರಿಗಳೇ ಇರಬೇಕು ಅಂದ್ರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಐಟಿ ಅಧಿಕಾರಿಗಳ ಕೆಲಸವನ್ನು ಸಿಎಂ ಕುಮಾರಸ್ವಾಮಿ ಹೊಗಳಬೇಕಿತ್ತು. ಆದರೆ ಅವರೇ ನಾಳೆ ಐಟಿ ದಾಳಿ ಆಗುತ್ತದೆ ಎಂದು ಸುದ್ದಿಗೋಷ್ಠಿ ಮೂಲಕ ಹೇಳಿದರು. ಈ ಮೂಲಕ ಹಣ, ದಾಖಲೆಗಳನ್ನು ಮುಚ್ಚಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರು. ಕೇಂದ್ರ ಸಂಸ್ಥೆಗಳ ಕಾರ್ಯದ ಬಗ್ಗೆ ಗೌಪ್ಯತೆ ಕಾಪಾಡುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲು ಯೋಗ್ಯತೆಯಿಲ್ಲ ಎಂದರು.

ತೇಜಸ್ವಿ ಮೇಲಿರುವ ಆರೋಪವೇನು?:
ಉದ್ಯಮಿ ಡಾ.ಸೋಮ್ ದತ್ತಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತೇಜಸ್ವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತೇಜಸ್ವಿ ಸೂರ್ಯ ಕೈಯಲ್ಲಿ ನಾನು 5 ವರ್ಷಗಳ ಕಾಲ ನಲುಗಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ತೇಜಸ್ವಿ ಅವರನ್ನು ನಂಬಿ ಬಲಿಪಶು ಆದವರಲ್ಲಿ ನಾನು ಮೊದಲೇನಲ್ಲ, ಕೊನೆಯವಳೂ ಅಲ್ಲ. ಪ್ರತಿಯೊಬ್ಬ ಹಿಂದೂವು ನಿಜವಾದ ಅರ್ಥದಲ್ಲಿ ಧಾರ್ಮಿಕನಾಗಿರಲ್ಲ. ದೊಡ್ಡದಾಗಿ ಭಾಷಣ ಮಾಡೋರೆಲ್ಲ ದೊಡ್ಡ ವ್ಯಕ್ತಿ ಆಗಿರಲಿಲ್ಲ ಎಂದು ಹೇಳಿದ್ದರು.

ಸತ್ಯ ಗೊತ್ತಿಲ್ಲದೆ ತೇಜಸ್ವಿ ಸೂರ್ಯಗೆ ಪುಕ್ಕಟೆ ಪ್ರಚಾರ ಕೊಡಬೇಡಿ. ಇಂಥ ವ್ಯಕ್ತಿಗೆ ಟಿಕೆಟ್ ಕೊಡುವ ಮೊದಲು ಬಿಜೆಪಿ ಹಿನ್ನೆಲೆಯನ್ನ ಪರಿಶೀಲಿಸಬೇಕಿತ್ತು. ತೇಜಸ್ವಿ ಸೂರ್ಯ ಜೊತೆಗಿನ ನಂಟಿದ್ದ ನನ್ನ ತಂದೆ-ತಾಯಿ ಕೂಡ ನೋವು ಅನುಭವಿಸಿದ್ದಾರೆ. ನನ್ನ ತಂದೆ-ತಾಯಿ ಮತ್ತಷ್ಟು ಕೊರಗುವುದು ನನಗೆ ಇಷ್ಟವಿಲ್ಲ ಎಂದು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *