ಹಿಂದೂ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ – ಇಬ್ಬರು IAS ಅಧಿಕಾರಿಗಳು ಅಮಾನತು

Public TV
1 Min Read

ತಿರುವನಂತಪುರಂ: ಧರ್ಮ ಆಧಾರಿತ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ವಿರುದ್ಧ ಟೀಕೆ ಆರೋಪದ ಮೇಲೆ ಇಬ್ಬರು ಐಎಎಸ್‌ ಅಧಿಕಾರಿಗಳನ್ನು (IAS Officers) ಕೇರಳ ಸರ್ಕಾರ ಅಮಾನತು ಮಾಡಿದೆ.

ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾದ ಕೆ. ಗೋಪಾಲಕೃಷ್ಣನ್ ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್‌ ಮಾಡಿದ್ದರು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್.ಪ್ರಶಾಂತ್ ಅವರು ಹಿರಿಯ ಅಧಿಕಾರಿಯ ವಿರುದ್ಧ ಟೀಕೆ ಮತ್ತು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರ ವರದಿಯ ಮೇರೆಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಳೆದ ತಿಂಗಳು ‘ಮಲ್ಲು ಹಿಂದೂ ಆಫೀಸರ್ಸ್’ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಅನ್ನು ರಚಿಸಿದ್ದಕ್ಕಾಗಿ 2013ರ ಬ್ಯಾಚ್ ಅಧಿಕಾರಿ ಗೋಪಾಲಕೃಷ್ಣನ್ ಅವರನ್ನು ಅಮಾನತುಗೊಳಿಸಲಾಗಿದೆ. ಐಎಎಸ್ ಅಧಿಕಾರಿ ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ಅಧಿಕಾರಿಗಳ ಪ್ರಕಾರ, ಫೋನ್‌ನ ಫೊರೆನ್ಸಿಕ್ ಪರೀಕ್ಷೆಯು ಅದನ್ನು ಹ್ಯಾಕ್ ಮಾಡಲಾಗಿದೆ ಎಂದು ದೃಢಪಡಿಸಲಿಲ್ಲ.

2007 ರ ಬ್ಯಾಚ್ ಅಧಿಕಾರಿ ಎನ್.ಪ್ರಶಾಂತ್ ಪ್ರಕರಣದಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ವಿರುದ್ಧ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಿರಿಯ ಅಧಿಕಾರಿ ತಮ್ಮ ವಿರುದ್ಧ ಆಧಾರ ರಹಿತ ಸುದ್ದಿ ವರದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಯತಿಲಕ್ ಅವರು ಆಧಾರರಹಿತ ಆರೋಪಗಳನ್ನು ಹರಡುವ ಮೂಲಕ ತಮ್ಮನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದರು. ಹಿರಿಯ ಅಧಿಕಾರಿಯನ್ನು ‘ಸೈಕೋಪಾತ್’ ಎಂದು ಟೀಕಿಸಿದ್ದರು. ಇದನ್ನೂ ಓದಿ: ಉತ್ತರಾಖಂಡ್ ಹೋಟೆಲ್‌ನಲ್ಲಿ ಕತ್ತು ಸೀಳಿ ಜಾದವ್‌ಪುರ ವಿವಿ ಪ್ರೊಫೆಸರ್ ಹತ್ಯೆ

ಕೇರಳದ ಕಂದಾಯ ಸಚಿವ ಕೆ.ರಾಜನ್, ಸರ್ಕಾರಿ ಅಧಿಕಾರಿಗಳು ಸೇವೆಯಲ್ಲಿದ್ದಾಗ ಶಿಸ್ತನ್ನು ಅನುಸರಿಸಬೇಕು. ಯಾರಾದರೂ ಅದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ಹಿಂದೆ ಎಚ್ಚರಿಸಿದ್ದರು.

Share This Article