ಮೈತ್ರಿ ನಾಯಕರಲ್ಲಿ ಮುಗಿಯದ ಹಗ್ಗಜಗ್ಗಾಟ – ದೇವೇಗೌಡ್ರನ್ನು ಭೇಟಿಯಾದ್ರು ವೇಣುಗೋಪಾಲ್

Public TV
1 Min Read

– ತುಮಕೂರಿಗಾಗಿ ಮುಂದುವರಿದ ‘ಕೈ’ ನಾಯಕರ ಚೌಕಾಶಿ
– ಕೈ ಟೆಕೆಟ್ ಆಕಾಂಕ್ಷಿಗಳಿಗೆ ನಿರಾಸೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರಾತ್ರಿ ಜೆಡಿಎಸ್ ವರಿಷ್ಠ ದೇವೇಗೌಡರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಸೂಚನೆ ಮೇರೆಗೆ ಪದ್ಮನಾಭ ನಗರಕ್ಕೆ ದೌಡಾಯಿಸಿದ ವೇಣುಗೋಪಾಲ್ ಕಾರ್ಯಕರ್ತರ ಅಸಮಾಧಾನ ಸೇರಿದಂತೆ ಹಲವು ವಿಚಾರಗಳ ಕುರಿತು ಗೌಡರೊಂದಿಗೆ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಸಿಎಂ ಕುಮಾರಸ್ವಾಮಿ ಸಹ ಹಾಜರಿದ್ದರು.

ಸಭೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇಂದು ಸಮಯದ ಅಭಾವದಿಂದಾಗಿ ಎಲ್ಲಾ ವಿಷಯಗಳ ಚರ್ಚೆ ಸಾಧ್ಯವಾಗಲಿಲ್ಲ. ಹೀಗಾಗಿ ಬೆಳಗ್ಗೆ ಪುನಃ ಸಭೆ ಸೇರಲಿದ್ದೇವೆ ಎಂದು ತಿಳಿಸಿದರು. ಸಭೆಯಲ್ಲಿ ವೇಣುಗೋಪಾಲ್ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್, ಸಚಿವ ಡಿಕೆ ಶಿವಕುಮಾರ್ ಸಾಥ್ ನೀಡಿದ್ದರು.

ಕೈ ಟೆಕೆಟ್ ಆಕಾಂಕ್ಷಿಗಳಿಗೆ ನಿರಾಸೆ:
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಇಂದು ನಡೆಯಬೇಕಿದ್ದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಮತ್ತೆ ಮುಂದೂಡಿಕೆಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಲಭ್ಯತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದ್ದು ಮಾರ್ಚ್ 22 ಕ್ಕೆ ರಾಜ್ಯ ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ ನಡೆಯಲಿದೆ.

ಈ ಹಿಂದೆ ಮಾರ್ಚ್ 16 ರಂದು ಸಭೆ ನಡೆಸಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದರೆ ರಾಹುಲ್ ಗಾಂಧಿ ಉತ್ತರಾಖಂಡ ಪ್ರವಾಸ ಹಿನ್ನೆಲೆ ಸಭೆ ರದ್ದಾಗಿತ್ತು. ಸಭೆ ರದ್ದಾದ ಬಳಿಕ ರಾಜ್ಯದಿಂದ ವರದಿ ತಂದಿದ್ದ ಕಾಂಗ್ರೆಸ್ ನಾಯಕರು ಬರಿಗೈಯಲ್ಲಿ ವಾಪಸ್ ತೆರಳಿದ್ದರು. ಇಂದು ಸಭೆ ನಡೆಸಿ ಅಂತಿಮ ಪಟ್ಟಿ ಹೊರಬರುತ್ತದೆ ಎನ್ನಲಾಗಿತ್ತು. ಆದರೆ ಇಂದೂ ರಾಹುಲ್ ಗಾಂಧಿ ಅರುಣಾಚಲ ಪ್ರದೇಶ ಪ್ರವಾಸದ ಹಿನ್ನೆಲೆಯಲ್ಲಿ ಮತ್ತೆ ಸಭೆ ರದ್ದಾಗಿದೆ. ರಾಹುಲ್ ಗಾಂಧಿ ಸಾಲು ಸಾಲು ಪ್ರವಾಸದಿಂದ ಸಭೆ ರದ್ದಾಗುತ್ತಿದ್ದು, ಟಿಕೆಟ್ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಎರಡನೇ ಬಾರಿ ನಿರಾಸೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *