ಜೂ.27ರಂದು 50 ಪಂಚಮಸಾಲಿಗಳಿಂದ ಸಿಎಂ ಮನೆ ಮುಂದೆ ಧರಣಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Public TV
2 Min Read

ಹಾವೇರಿ: 2A ಮೀಸಲಾತಿ ನೀಡುವಂತೆ ಆಗ್ರಹಿಸಿ ಜೂನ್ 27ರಂದು ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ 50 ಸಾವಿರ ಪಂಚಮಸಾಲಿಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗವು ಜಿಲ್ಲೆಯಲ್ಲಿ ಸಮಾಜದ ಜನರ ಸ್ಥಿತಿಗತಿ ಕುರಿತು ಸಮೀಕ್ಷೆ ಆರಂಭಿಸಲು ಮುಂದಾಗಿದೆ. ಸಿಎಂ ಅವರಿಗೆ ಈಗಾಗಲೇ ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಬಾರಿ ಮನವಿ ಕೊಟ್ಟಿದ್ದೇವೆ. ಆದರೆ ಸರ್ಕಾರ ಭರವಸೆ ಈಡೇರಿಸುವುದಾಗಿ ಹೇಳಿ ಕೊಟ್ಟ ಮಾತು ತಪ್ಪಿದೆ. ಹಾಗಾಗಿ ಹೋರಾಟ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬ ಹೆಂಡ್ತಿಗೆ ಒಬ್ಬನೇ ತಾಳಿ ಕಟ್ಟಬಹುದು, ಇಲ್ಲಿ ಒಬ್ಬ ಹೆಂಡ್ತಿಗೆ ಇಬ್ಬಿಬ್ರು ತಾಳಿ ಕಟ್ಟಿದ್ದಾರೆ: ಸಿ.ಎಂ.ಇಬ್ರಾಹಿಂ

ಮುಖ್ಯಮಂತ್ರಿಗಳ ನಿವಾಸವೇ ವಿಧಾನಸೌಧ ಎಂಬ ಭಾವನೆಯಿಂದ ಶಿಗ್ಗಾಂವಿಯ ಸಿಎಂ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ಆಯೋಗದವರು ಸಮೀಕ್ಷೆಗೆ ಬಂದಾಗ ಸಮಾಜದ ಜನರು ಲಿಂಗಾಯತರು ಅಂತ ಹೇಳದೇ ಸ್ಪಷ್ಟವಾಗಿ ಪಂಚಮಸಾಲಿಗಳು ಎಂದು ಹೇಳಬೇಕು. ನೈಜಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದ್ದಾರೆ.

ನಮ್ಮಲ್ಲಿ ಪಕ್ಷ, ಮಠಗಳಲ್ಲಿ ಭಿನ್ನತೆ ಇರಬಹುದು. ಆದರೆ 2ಎ ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಸಿಎಂ ಅವರಿಗೆ ಧರಣಿ ಸತ್ಯಾಗ್ರಹದ ಬಗ್ಗೆ ಬಹಿರಂಗ ಪತ್ರ ಕೊಟ್ಟ ಮೇಲೆ ಸಚಿವ ಸಿ.ಸಿ.ಪಾಟೀಲರು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಜೂನ್ 22ರಂದು ಸಚಿವ ಸಿ.ಸಿ.ಪಾಟೀಲ ನಿವಾಸದಲ್ಲಿ ಸಭೆ ಕರೆದಿದ್ದಾರೆ. ನಮ್ಮ ಸಮಾಜದ ಪ್ರಮುಖರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಜೂನ್ 27ರ ಒಳಗಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂಬುದು ನಮ್ಮ ಒತ್ತಾಯ. ಇಲ್ಲದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಂಗನವಾಡಿಯಲ್ಲಿ ಅನ್ನದ ಬಿಸಿಗಂಜಿ ಬಿದ್ದು ಆಸ್ಪತ್ರೆಗೆ ಸೇರಿದ ಮಕ್ಕಳು

ಸಿಎಂ ಬೊಮ್ಮಾಯಿ ಅವರ ಮೇಲೆ ಇವತ್ತಿಗೂ ನಂಬಿಕೆಯಿದೆ. ಆದರೆ ಅವರು ಮೀಸಲಾತಿ ಘೋಷಣೆ ಬಗ್ಗೆ ವಿಳಂಬ ಮಾಡುತ್ತಿರುವುದರ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ಇದರಿಂದ ನಮ್ಮಲ್ಲಿ ನಿರಾಶೆ ಭಾವನೆ ಬಂದಿದೆ. ನಮಗೆ ಸಿಎಂ ಅವರು ಜೂನ್ 22ರ ಸಭೆ ಮೂಲಕ ಸಿಹಿ ಸುದ್ದಿ ಕೊಡಬಹುದು ಎಂಬ ವಿಶ್ವಾಸವಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *