ನವದೆಹಲಿ: ‘ವೋಟ್ ಚೋರಿ’ (Vote Chori) ಅಭಿಯಾನದ ಮೂಲಕ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸುಮಾರು 272 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಮಾಜಿ ಸೇನಾ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ಗುಂಪು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಬಹಿರಂಗ ಪತ್ರ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷದ ಇಂತಹ ಆರೋಪಗಳು ಸಾಂಸ್ಥಿಕ ಬಿಕ್ಕಟ್ಟಿನ ಸೋಗಿನಲ್ಲಿ ರಾಜಕೀಯ ಹತಾಶೆಯನ್ನು ಹೊರಹಾಕುವ ಪ್ರಯತ್ನ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅಮಿತ್ ಶಾ ನೀಡಿದ್ದ ಡೆಡ್ ಲೈನ್ಗೆ 12 ದಿನ ಮೊದಲೇ ಟಾರ್ಗೆಟ್ ಮಾದ್ವಿ ಹಿಡ್ಮಾ ಹಿಟ್.!
ಪತ್ರಕ್ಕೆ ಸಹಿ ಹಾಕಿದ 272 ಜನರಲ್ಲಿ 16 ನಿವೃತ್ತ ನ್ಯಾಯಾಧೀಶರು, 123 ಮಾಜಿ ಅಧಿಕಾರಿಗಳು (ಅವರಲ್ಲಿ 14 ರಾಯಭಾರಿಗಳು) ಮತ್ತು 133 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿದ್ದಾರೆ. 272 ಸಹಿ ಹಾಕಿದವರಲ್ಲಿ ಪ್ರಮುಖರು ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್ಪಿ ವೈದ್, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಐಎಫ್ಎಸ್ ಲಕ್ಷ್ಮಿ ಪುರಿ ಮತ್ತು ಇತರರಿದ್ದಾರೆ.
ಸಾಂವಿಧಾನಿಕ ಅಧಿಕಾರಿಗಳ ಮೇಲಿನ ಹಲ್ಲೆ ಹೆಸರಿನ ಶೀರ್ಷಿಕೆಯಲ್ಲಿ ಪತ್ರದಲ್ಲಿ ಬರೆದಿದ್ದು, ನಾಗರಿಕ ಸಮಾಜದ ಹಿರಿಯ ನಾಗರಿಕರಾದ ನಾವು, ಭಾರತದ ಪ್ರಜಾಪ್ರಭುತ್ವ ಅಡಿಪಾಯದ ಸಂಸ್ಥೆಗಳ ಕಡೆಗೆ ನಿರ್ದೇಶಿಸಲಾದ ವಿಷಪೂರಿತ ಹೇಳಿಕೆ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತೇವೆ. ಕೆಲವು ರಾಜಕೀಯ ನಾಯಕರು ತಮ್ಮ ನಾಟಕೀಯ ರಾಜಕೀಯ ತಂತ್ರದಲ್ಲಿ ಪ್ರಚೋದನಕಾರಿ ಆಧಾರರಹಿತ ಆರೋಪಗಳನ್ನು ಆಶ್ರಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟ ಮುನ್ನಡೆಸಲು ಅಖಿಲೇಶ್ ಸಮರ್ಥ – ಕಾಂಗ್ರೆಸ್ ವಿರುದ್ದ ಎಸ್ಪಿ ಅಪಸ್ವರ
ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಾಧನೆಗಳನ್ನು ಸಂಸತ್ತನ್ನು ಮತ್ತು ಅದರ ಸಾಂವಿಧಾನಿಕ ಕಾರ್ಯಕರ್ತರನ್ನು ಪ್ರಶ್ನಿಸುವ ಮೂಲಕ ಕಳಂಕಿತಗೊಳಿಸಲು ಪ್ರಯತ್ನ ನಡೆದಿತ್ತು. ಈಗ ಭಾರತದ ಚುನಾವಣಾ ಆಯೋಗದ ಸಮಗ್ರತೆ ಮೇಲೆ ವ್ಯವಸ್ಥಿತ ಮತ್ತು ಪಿತೂರಿ ದಾಳಿಗಳನ್ನು ಎದುರಿಸುವ ಸರದಿಯಾಗಿದ್ದು ಇದು ಸೂಕ್ತ ನಡೆಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

