ಮೈಸೂರು ಮಹಾರಾಜರ ಕೊಡುಗೆಗೆ ಕಾಂಗ್ರೆಸ್ ಅಪಸ್ವರ – ಮಹದೇವಪ್ಪ ಮೊದ್ಲು ಇತಿಹಾಸ ಅರಿಯಲಿ: ಜೋಶಿ ಕಿಡಿ

Public TV
2 Min Read

– ತುಷ್ಟೀಕರಣ-ಓಲೈಕೆ ರಾಜಕಾರಣ ನಿರತ ಕಾಂಗ್ರೆಸ್ ಎಂದು ಆಕ್ರೋಶ

ನವದೆಹಲಿ: ದೇಶ ಮತ್ತು ಕರುನಾಡಿಗೆ ಮೈಸೂರು (Mysuru) ಮಹಾಸಂಸ್ಥಾನದ ಕೊಡುಗೆ ಅನನ್ಯವಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಅದನ್ನು ಮರೆತು ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಪುತ್ರ ಯತೀಂದ್ರ ಮತ್ತು ಸಚಿವ ಹೆಚ್‌ಸಿ ಮಹದೇವಪ್ಪ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವರು, ತುಷ್ಟೀಕರಣ ಹಾಗೂ ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಹೆಮ್ಮೆ ಮೈಸೂರು ಮಹಾಸಂಸ್ಥಾನದ ಕೊಡುಗೆಗಳ ಬಗ್ಗೆ ವಿರೋಧಾಭಾಸವಾಗಿ ಮಾತನಾಡುತ್ತಿರುವುದು ನಿಜಕ್ಕೂ ಅಸಹ್ಯದ ಪರಮಾವಧಿ. ಇತ್ತೀಚಿಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತ್ರೀಂದ್ರ `ಮೈಸೂರು ಸಂಸ್ಥಾನಕ್ಕಿಂತಲೂ ಹೆಚ್ಚಿನ ಕೆಲಸವನ್ನು ನಮ್ಮಪ್ಪ ಮಾಡಿದ್ದಾರೆ’ ಎಂದರು. ನಿನ್ನೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ `ಕೆಆರ್‌ಎಸ್ ಡ್ಯಾಂ ಕಟ್ಟಲು ಬುನಾದಿ ಹಾಕಿದ್ದು ಟಿಪ್ಪು ಸುಲ್ತಾನ್’ ಎಂಬ ಹೇಳಿಕೆ ನೀಡಿರುವುದು ನಿಜಕ್ಕೂ ಕನ್ನಡ ನಾಡಿನ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ

ಸಚಿವ ಮಹಾದೇವಪ್ಪ ಅವರು ಮೊದಲು ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲಿ. ಟಿಪ್ಪು ಸುಲ್ತಾನ್ ಯುಗಾಂತ್ಯವಾಗಿದ್ದು 1799. ಆದರೆ, ರಾಜ್ಯದ ಸುಭಿಕ್ಷೆಗಾಗಿ ನೀರಾವರಿ, ಕುಡಿಯುವ ನೀರು ಮತ್ತು ಜಲ ವಿದ್ಯುತ್ ಶಕ್ತಿಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ್ದು 1911ರಲ್ಲಿ. ಆಗಿನ ಮೈಸೂರು ರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ಆಳ್ವಿಕೆಯಲ್ಲಿ ಇದಕ್ಕೆ ಅಡಿಪಾಯ ಹಾಕಲಾಯಿತು. ವಿಶ್ವಪ್ರಸಿದ್ಧ ಸಿವಿಲ್ ಎಂಜಿನಿಯರ್ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟು ನಿರ್ಮಿಸಿದರು ಎಂದು ತಿರುಗೇಟು ನೀಡಿದ್ದಾರೆ.

ಇಂದಿಗೂ ಮೈಸೂರು ಮಹಾರಾಜರ ಮಹತ್ಕಾರ್ಯ ನೆನೆದು, ಪೂಜೆ ಸಲ್ಲಿಸುವ ಮೂಲಕ ಜನ ದೈನಂದಿನ ಜೀವನ ಆರಂಭಿಸುತ್ತಿದ್ದಾರೆ. ಆದರೆ, ಇತಿಹಾಸದ ಕುರಿತು ಮನಸೋ ಇಚ್ಛೆ ಮಾತನಾಡುವ ಕಾಂಗ್ರೆಸ್ಸಿಗರ ಈ ಕುತಂತ್ರದ ಬುದ್ಧಿಗೆ ಏನು ಹೇಳಬೇಕು? ಮೈಸೂರು ಒಡೆಯರ ತ್ಯಾಗ, ಕರುನಾಡಿನ ಅಭಿವೃದ್ಧಿಗೆ ಕೊಡುಗೆಯನ್ನು ಕೊಂಡಾಡದೆ ಕಾಂಗ್ರೆಸ್ ಪಕ್ಷ ಎಲ್ಲಕ್ಕಿಂತ ತಾನೇ ಹೆಚ್ಚೆಂದು ಬೀಗುವಂತೆ ಹೇಳಿಕೆ ನೀಡುತ್ತಿರುವುದು ಅವರ ಹತಾಶೆಯನ್ನು ತೋರ್ಪಡಿಸುತ್ತದೆ ಎಂದು ಚಾಟಿ ಬೀಸಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತು, ಬರೀ ತುಷ್ಟೀಕರಣ ರಾಜಕಾರಣದಲ್ಲಿ ಮುಳುಗಿದೆ. ರಾಜ್ಯದ ಸಂಪತ್ತನ್ನು ಬರಿದು ಮಾಡುತ್ತ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕಿದೆ. ಅದೂ ಸಾಲದೆಂಬಂತೆ ಕರುನಾಡಿನ ರಾಜ, ಮಹಾರಾಜರ ಬಗ್ಗೆ ಅಪಸ್ವರ ಎತ್ತಿ ಮಾತನಾಡುತ್ತಿರುವುದು ನಾಡಿನ ದುರಂತವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ

Share This Article