ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿ ಕೊಂದ್ರು!

Public TV
1 Min Read

ಮುಂಬೈ: ವರದಕ್ಷಿಣೆಗಾಗಿ ಮಹಿಳೆಯನ್ನು ಪತಿ ಕುಟುಂಬಸ್ಥರು ಸಜೀವ ದಹಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಮದನಪುರ ತಾಲೂಕಿನ ಮುಹಲಾನ್ ಗ್ರಾಮದಲ್ಲಿ ನಡೆದಿದೆ.

24 ವರ್ಷದ ಚಂಚಲಾ ದೇವಿ ಸಾವನ್ನಪ್ಪಿದ ಮಹಿಳೆ. ಮಂಗಳವಾರ ಮಧ್ಯರಾತ್ರಿ ಚಂಚಲಾರ ಕೊಲೆಯಾಗಿದ್ದು, ಕುಟುಂಬಸ್ಥರು ಮಹಿಳೆಯ ಪೋಷಕರಿಗೂ ಮಾಹಿತಿ ನೀಡದೇ ಬುಧವಾರ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಚಂಚಲಾ ಸಾವಿನ ಸುದ್ದಿ ತಿಳಿದ ಗ್ರಾಮಕ್ಕೆ ಆಗಮಿಸಿದ ಪೋಷಕರು ಆಕೆಯ ಪತಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಚಂಚಲಾ ಮಾವ ಕುಮಾರ್ ಬಲಿ ಸಿಂಗ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಚಂಚಲಾ ಪೋಷಕರು ಮೂಲತಃ ಜಾರ್ಖಂಡ್ ರಾಜ್ಯದ ಹುಸೇನಾಬಾದ್ ನಗರದ ನಿವಾಸಿಗಳು. ಮದುವೆ ಬಳಿಕ ಚಂಚಲಾಗೆ ಪತಿ ನೀರಜ್ ಸಿಂಗ್, ಮಾವ ಬಲಿ ಸಿಂಗ್ ಸೇರಿದಂತೆ ಇತರೆ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಚಂಚಲಾ ತಂದೆ ಸುನಿಲ್ ಸಿಂಗ್ ಆರೋಪಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಗ್ರಾಮದಲ್ಲಿ ಜಮೀನು ಮಾರಿ ಬಂಗಾರದ ಚೈನ್ ತಂದುಕೊಡಲಾಗಿತ್ತು. ಆದ್ರೂ ಕೆಲವು ದಿನಗಳಿಂದ ಚಂಚಲಾಳನ್ನು ಕೊಲೆ ಮಾಡುತ್ತೇವೆ ಅಂತಾ ಧಮ್ಕಿ ಹಾಕುತ್ತಿದ್ದರು. ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಅಂತಾ ಸಿನಿಲ್ ಸಿಂಗ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *