ಮುಂಬೈ: ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಬುಧವಾರ ರಾತ್ರಿಯಿಂದ ತನ್ನ ಹಾರಾಟವನ್ನು ನಿಲ್ಲಿಸಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ.
ಜೆಟ್ ಏರ್ವೇಸ್ ತಾತ್ಕಲಿಕ ನಿರ್ವಹಣೆಗಾಗಿ ತುರ್ತು 400 ಕೋಟಿ ರೂ. ಹಣವನ್ನು ಸಾಲವಾಗಿ ನೀಡಬೇಕೆಂದು ಸಾರ್ವಜನಿಕ ಬ್ಯಾಂಕ್ಗಳಲ್ಲಿ ಕೇಳಿಕೊಂಡಿತ್ತು. ಜೆಟ್ ಏರ್ವೇಸ್ ಅರ್ಜಿಯನ್ನು ಬ್ಯಾಂಕ್ ಗಳು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಹಾರಾಟವನ್ನು ತಾತ್ಕಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ವರದಿಯಾಗಿದೆ.
ಇಂದು ನಡೆದ ಸಭೆಯಲ್ಲಿ ಹಣಕಾಸುವ ನೀಡುವ ವಿಚಾರವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಒಂದು ವೇಳೆ ಗುರುವಾರ ಬ್ಯಾಂಕ್ ಗಳು ಹಣಕಾಸಿನ ನೆರವು ನೀಡದೇ ಇದ್ದಲ್ಲಿ ಜೆಟ್ ಏರ್ವೇಸ್ ತನ್ನ ಹಾರಾಟವನ್ನು ನಿಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆಗೆ ಸಾರ್ವಜನಿಕ ರಂಗದ ಬ್ಯಾಂಕ್ಗಳು 1500 ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ನೀಡಲು ಮುಂದಾಗಿದ್ದವು. ಆದರೆ ಇದೂವರೆಗೆ ಕೇವಲ 300 ಕೋಟಿಯನ್ನು ಮಾತ್ರ ಬಿಡುಗಡೆ ಆಗಿದೆ. ಸದ್ಯ ತುರ್ತು 400 ಕೋಟಿ ನೀಡಬೇಕೆಂದು ಕಂಪನಿಯ ಸಿಇಓ ವಿನಯ್ ದುಬೆ ಮನವಿ ಮಾಡಿದ್ದರು. ಮಂಗಳವಾರ ಬ್ಯಾಂಕ್ಗಳ ಜೊತೆ ನಡೆದ ಸಭೆಯ ವಿಫಲವಾಗಿತ್ತು. ಕಂಪನಿಯ ನಿರ್ವಹಣೆಗೆ ಹಣ ಸಮಸ್ಯೆ ಎದುರಾಗಿದ್ದರಿಂದ ಕೇವಲ ಆರೇಳು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಡಿಸೆಂಬರ್ ನಲ್ಲಿ 123 ವಿಮಾನಗಳ ಸೇವೆಯನ್ನು ಒದಗಿಸುತ್ತಿತ್ತು.
ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳ ಹಿತರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕೆಂದು ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್ ಉಪಾಧ್ಯಕ್ಷ ಆಸಿಂ ವಲೈನಿ ತಿಳಿಸಿದ್ದರು.
1993ರಲ್ಲಿ ನರೇಶ್ ಮತ್ತು ಅನಿತಾ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಜೆಟ್ ಏರ್ವೇಸ್ ಸುಮಾರು 7 ಸಾವಿರ ಕೋಟಿಗೂ ಅಧಿಕ ಸಾಲವನ್ನು ಮಾಡಿಕೊಂಡಿದೆ. 2013ರಲ್ಲಿ ಸಾಲದ ಸುಳಿಯಲ್ಲಿ ಸಂಸ್ಥೆ ಸಿಲುಕಿದ್ದಾಗ, ಅಬುದಾಭಿಯ ಎತಿಹಾದ್ ಏರ್ವೇಸ್ ಸಂಸ್ಥೆ ಶೇ.24ರಷ್ಟು (ಸುಮಾರು 4 ಸಾವಿರ ಕೋಟಿ) ಪಾಲನ್ನು ಖರೀದಿಸಿತ್ತು.