ಕಾಂಗ್ರೆಸ್ ಒಕ್ಕಲಿಗರ ದ್ರೋಹಿ, ಡಿಕೆಶಿ ಸುಳ್ಳಿನ ಶೂರ – ಜೆಡಿಎಸ್ ಲೇವಡಿ

Public TV
2 Min Read

ಬೆಂಗಳೂರು: ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಜೆಡಿಎಸ್ (JDS) ಕೇಸ್ ಹಾಕಿಸಿತ್ತು ಎಂಬ ಡಿಸಿಎಂ ಡಿಕೆಶಿವಕುಮಾರ್ (DCM DK Shivakumar) ಹೇಳಿಕೆ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಎಕ್ಸ್‌ನಲ್ಲಿ ಡಿಕೆಶಿ ಹೇಳಿಕೆ ಖಂಡಿಸಿರುವ ಜೆಡಿಎಸ್ ಡಿಕೆಶಿವಕುಮಾರ್‌ರನ್ನು ಸುಳ್ಳಿನ ಶೂರ ಎಂದು ಲೇವಡಿ ಮಾಡಿದೆ. ಒಕ್ಕಲಿಗರ ದ್ರೋಹಿ ಕಾಂಗ್ರೆಸ್, ಒಕ್ಕಲಿಗರ ದ್ರೋಹಿ ಡಿಕೆಶಿವಕುಮಾರ್ ಎಂದು ವಾಗ್ದಾಳಿ ನಡೆಸಿದೆ.

ಟ್ವೀಟ್‌ನಲ್ಲಿ ಏನಿದೆ?
ಸುಳ್ಳಿನ ಶೂರ ಡಿಕೆ ಶಿವಕುಮಾರ್, ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ್ಮ ಸರ್ಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ, ಯಾಕೆ? ಪೂಜ್ಯ ಸ್ವಾಮೀಜಿ ಅವರ ಮೇಲೆ ನೀವು ಎಫ್‌ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ.ಇದನ್ನೂ ಓದಿ: ರಾಯಚೂರು | ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಜೆಡಿಎಸ್ ಸರ್ಕಾರವಿದ್ದಾಗ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸ್ ಹಾಕಲಾಗಿತ್ತು ಎಂದು ಬಾಲಬುದ್ಧಿಯ ನೀವು ಬಡಬಡಿಸಿದ್ದೀರಿ! ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು? ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ? ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಏನು? ಮುಂದೆ ಆ ಪ್ರಕರಣ ರದ್ದಾಯಿತು ನಿಮಗೆ ಗೊತ್ತಿಲ್ಲವೇ?

ಪೂಜ್ಯ ಸ್ವಾಮೀಜಿ ಅವರ ವಿರುದ್ಧ ನಿಮ್ಮ ಇಡೀ ಕಾಂಗ್ರೆಸ್ ಸರ್ಕಾರ ತೊಡೆತಟ್ಟಿ ನಿಂತಿದೆ. ಸಚಿವರುಗಳೆಲ್ಲ ಅವರ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ಹೇಳಿಕೆಯ ಬಗ್ಗೆ ಪರಮಪೂಜ್ಯರು ವಿಷಾದ ವ್ಯಕ್ತಪಡಿಸಿದ ಮೇಲೆಯೂ ಅವರ ಮೇಲೆ ಸರ್ಕಾರ ಯಾರದೋ
ನಿರ್ದಿಷ್ಟ ಚಿತಾವಣೆಗೆ ಒಳಗಾಗಿ ಕಾಲು ಕೆರೆದು ಜಗಳಕ್ಕೆ ನಿಂತಿದೆ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅಪಮಾನಕರವಾಗಿ ವರ್ತಿಸುತ್ತಿದೆ. ಓಲೈಕೆ ರಾಜಕೀಯ, ತುಷ್ಟೀಕರಣದ ಪರಾಕಾಷ್ಠೆ ಇದು.
ಒಕ್ಕಲಿಗರಿಗೆ ಇದೆಲ್ಲಾ ಅರ್ಥವಾಗುತ್ತಿದೆ.
ಒಕ್ಕಲಿಗ ವಿರೋಧಿ ಡಿಕೆಶಿಯವರೇ ನಿಮಗಿದು ತರವೇ?

ಮಿಸ್ಟರ್ ಡಿಕೆಶಿಯವರೇ. ಒಕ್ಕಲಿಗರ ಅಸ್ಮಿತೆಯನ್ನು ಕೆಣಕಿದ್ದೀರಿ. ನಿಮ್ಮ ಸರ್ಕಾರ, ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯವನ್ನಾದರೂ ಮಾಡಿ. ಅಧಿಕಾರಕ್ಕಾಗಿ ಸಮುದಾಯದಿಂದ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲ ಕಸವಾಗಿದೆ. ಇದಕ್ಕೆ ನೀವು ಬೆಲೆ ತೆರುತ್ತೀರಿ.ಒಕ್ಕಲಿಗದ್ರೋಹಿ ಕಾಂಗ್ರೆಸ್, ಒಕ್ಕಲಿಗದ್ರೋಹಿ ಡಿಕೆಶಿ ಎಂದು ಜೆಡಿಎಸ್ ಕಿಡಿಕಾರಿದೆ.ಇದನ್ನೂ ಓದಿ: ಇಂದು ರೈತರ ಪ್ರತಿಭಟನೆ: ದೆಹಲಿ–ನೋಯ್ಡಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

Share This Article