ಮಾ. 5ರಂದು ಶಿವಲಿಂಗೇಗೌಡ ಕಾಂಗ್ರೆಸ್‍ಗೆ ಸೇರ್ಪಡೆ

Public TV
2 Min Read

ಹಾಸನ: ಜೆಡಿಎಸ್‍ (JDS) ನ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ದಳ ಪಕ್ಷದ ಮತ್ತೊಂದು ವಿಕೆಟ್ ಪತನವಾಗಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ (K.M Shivalinge Gowda) ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇದ್ದ ಗೊಂದಲಕ್ಕೆ ಇಂದು ತೆರೆ ಎಳೆದಿದ್ದಾರೆ.

ಮಾರ್ಚ್ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮದಲ್ಲಿ ಆಯೋಜನೆಗೊಂಡಿರುವ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಗಮಿಸಲಿದ್ದು, ಈ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ. ಕಳೆದ 1 ವರ್ಷದಿಂದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರಲಿಲ್ಲ.

ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದು ದಟ್ಟವಾಗಿ ಹಬ್ಬಿತ್ತು. ಈ ಬೆನ್ನಲ್ಲೆ ಫೆಬ್ರವರಿ 12ರಂದು ಅರಸೀಕೆರೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಹೆಚ್‍ಡಿಕೆ (HD Kumaraswamy), ಶಿವಲಿಂಗೇಗೌಡರ ವಿರುದ್ಧ ಹರಿಹಾಯ್ದಿದ್ದರು. ಬಾಣಾವರ ಅಶೋಕ್ ಎಂಬವರನ್ನು ಅಭ್ಯರ್ಥಿ ಎಂದು ಬಿಂಬಿಸಿದ್ದರು. ಅದೇ ದಿನ ರಾಯಚೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಶಿವಲಿಂಗೇಗೌಡ ಕಾಂಗ್ರೆಸ್‍ಗೆ ಬರುತ್ತಾರೆ ಎಂದಿದ್ದರು.

ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ಪದೇ ಪದೇ ಸ್ಪಷ್ಟನೆ ನೀಡಿದ್ದ ಶಿವಲಿಂಗೇಗೌಡ, ಜೆಡಿಎಸ್ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಅಂತಿಮವಾಗಿ ನಮ್ಮ ಕ್ಷೇತ್ರದ ಜನರು, ಬೆಂಬಲಿಗರು, ಅಭಿಮಾನಿಗಳ ಸಭೆ ಕರೆದು ತೀರ್ಮಾನ ಮಾಡುತ್ತೇನೆ. ಅವರು ಏನು ಹೇಳುತ್ತಾರೆ ಅದೇ ಅಂತಿಮ ಎಂದಿದ್ರು. ಇದನ್ನೂ ಓದಿ: ಡಿಕೆಶಿ ಭೇಟಿಯಾದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ – ಕಾಂಗ್ರೆಸ್‌ ಸೇರಲು ಸಿದ್ಧತೆ

ಮಾರ್ಚ್ 5ರಂದು ಸೇರ್ಪಡೆ: ಈ ಹಿಂದೆ ಹೇಳಿದಂತೆ ಬುಧವಾರ ರಾತ್ರಿ ಶಿವಲಿಂಗೇಗೌಡರು ಅರಸೀಕೆರೆಯ ತಮ್ಮ ತೋಟದ ಮನೆಯಲ್ಲಿ ಸಾವಿರಾರು ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ಅಭಿಪ್ರಾಯ ಕೇಳಿದ್ರು. ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಕಾರ್ಯಕರ್ತರು ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕರು, ದಳಪತಿಗಳ ವಿರುದ್ಧ ಹರಿಹಾಯ್ದರು. ಇನ್ನು ಇದೇ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಈ ವೇಳೆ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಬಂದರೆ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಲು ಕಾರ್ಯಕರ್ತರು ತೀರ್ಮಾನಿಸಿದ್ದಾರೆ.

ಒಟ್ಟಿನಲ್ಲಿ ಒಂದು ವರ್ಷದಿಂದ ನಡೆಯುತ್ತಿದ್ದ ಅರಸೀಕೆರೆ ಶಾಸಕ ಕೆಎಂಶಿ ಜೆಡಿಎಸ್ ತೊರೆಯುವ ವಿಚಾರಕ್ಕೆ ಕಡೆಗೂ ತೆರೆ ಬಿದ್ದಿದ್ದು, ಈ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಜೆಡಿಎಸ್ ಮತ್ತೊಂದು ವಿಕೆಟ್ ಪತನವಾಗಿದೆ. 2023 ರ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಜೆಡಿಎಸ್‍ನ ಇಬ್ಬರು ಶಾಸಕರು ಪಕ್ಷ ತೊರೆಯುವ ಮೂಲಕ ದೊಡ್ಡ ಹೊಡೆತ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *