ಮಂತ್ರಾಲಯದಲ್ಲಿ ಜನಾರ್ದನ ರೆಡ್ಡಿ- ವೈಎಸ್‍ಆರ್ ದೇವರು ಎಂದ್ರು ರೆಡ್ಡಿ

Public TV
1 Min Read

ರಾಯಚೂರು: ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅತೀವ ಸಂತೋಷದಲ್ಲಿದ್ದಾರೆ. ಒಂದು ಕಾಲದಲ್ಲಿ ತಮ್ಮ ಗಣಿಗಾರಿಕೆಗೆ ಬೆಂಬಲವಾಗಿದ್ದ ಆಂಧ್ರ ಮಾಜಿ ಸಿಎಂ ವೈಎಸ್ ರಾಜಶೇಖರ್ ರನ್ನ ದೇವರಿಗೆ ಹೋಲಿಸಿ ರೆಡ್ಡಿ ಹೊಗಳಿದ್ದಾರೆ.

ಈ ಕಾಲದಲ್ಲಿ ಮನುಷ್ಯರಲ್ಲಿ ದೇವರನ್ನ ಕಾಣೋದು ಕಷ್ಟ. ಆದರೆ ವೈಎಸ್ ರಾಜಶೇಖರ್ ರೆಡ್ಡಿ ಮಹಾನುಭಾವರು. ಅವರು ಮನುಷ್ಯರಲ್ಲ ದೇವರು. ಅವರ ಮಗ ಈಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುತ್ತಿದ್ದಾರೆ ಇದರಿಂದ ಆಂಧ್ರಕ್ಕೆ ಒಳ್ಳೆಯದಾಗುತ್ತದೆ. ಇದು ನನ್ನೊಬ್ಬನ ಹರಕೆ ಅಲ್ಲ, ಇಡೀ ಆಂಧ್ರದ ಜನ ಅವರನ್ನ ಗೆಲ್ಲಿಸಲು ಮತ ಹಾಕಿದ್ದಾರೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ಗಣಿಗಾರಿಕೆಯಲ್ಲಿ ರೆಡ್ಡಿಗೆ ಬೆಂಬಲವಾಗಿ ನಿಂತಿದ್ದ ವೈಎಸ್ ರಾಜಶೇಖರ್ ಪುತ್ರ ಈಗ ಆಂಧ್ರ ಸಿಎಂ ಆಗುತ್ತಿರೋದ್ರಿಂದ ರೆಡ್ಡಿಗೆ ಆನೆಬಲ ಬಂದಂತಾಗಿದೆ. ಗಾಣಗಾಪುರದಲ್ಲಿ ದತ್ತಾತ್ರೇಯನಿಗೆ ಹರಕೆ ಸಲ್ಲಿಸಿ ಬಳಿಕ ಮಂತ್ರಾಲಯದಲ್ಲಿ ರಾಯರಿಗೆ ಗಜ ರಥೋತ್ಸವ, ಬಂಗಾರ ರಥೋತ್ಸವ, ನವರತ್ನ ಖಚಿತ ರಥೋತ್ಸವ ಸೇರಿ ಐದು ಸೇವೆಗಳನ್ನ ಸಲ್ಲಿಸಿದ್ದಾರೆ. ಮೋದಿ ಕೂಡಾ ಭಗವಂತನ ಆಶೀರ್ವಾದದಿಂದ ಪ್ರಧಾನಿ ಆಗಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿರುವ ರೆಡ್ಡಿ ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಇತಿ ಮಿತಿ ಅನ್ನೋದು ಇರುತ್ತೆ. ಮುಂದೆ ರಾಜ್ಯಕ್ಕೂ ದೇಶಕ್ಕೂ ಒಳ್ಳೆಯದಾಗುತ್ತೆ ಎಂದಿದ್ದಾರೆ. ರಾಯರ ಮಠದಲ್ಲಿ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ ಅವರಿಗೆ ಮಠದ ಶ್ರೀಗಳು ಆಶಿರ್ವಚನ ನೀಡಿದ್ದಾರೆ.

ಒಟ್ಟಾರೆ ಭಕ್ತರಾಗಿ ಮಠಕ್ಕೆ ಬಂದ ಜನಾರ್ದನರೆಡ್ಡಿ ದೇವರಿಗೆ ಸತತವಾಗಿ ಐದು ಸೇವೆಗಳನ್ನ ಸಲ್ಲಿಸಿದ್ದಾರೆ. ಆದರೆ ಜನಾರ್ದನ ರೆಡ್ಡಿ ಕಟ್ಕೊಂಡ ಹರಕೆ ಏನು..? ಈಡೇರಿದ ಅವರ ಬಯಕೆಗಳು ಯಾವುದು ಅನ್ನೋದು ಮಾತ್ರ ಸದ್ಯಕ್ಕೆ ತಿಳಿದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *