ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿಯಿದ್ದಂತೆ: ಜನಾರ್ದನ ಪೂಜಾರಿ

Public TV
1 Min Read

– ಅಮಿತ್ ಶಾ ಬ್ರೈನ್ ಇರೋ ಮನುಷ್ಯ

ಮಂಗಳೂರು: ಸದಾ ಮಾಜಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಅವರು ಈ ಬಾರಿಯೂ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿಯೇ ಹೋಗುತ್ತಾರೆ. ಅದು ನನಗೆ ಮಾತ್ರವಲ್ಲ ಆ ದೇವರಿಗೆ ಕೂಡ ಗೊತ್ತಿದೆ. ಅವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯರಿಗೆ ಪಕ್ಷದಲ್ಲಿ ಮತ್ತೆ ಪ್ರಾಮುಖ್ಯತೆ ಕೊಟ್ಟಿದ್ದು ತಪ್ಪು. ಅವರಿಗೆ ಯಾವುದೇ ಜವಾಬ್ದಾರಿ ನೀಡಬಾರದು ಎಂದು ಹೈಕಮಾಂಡಿಗೆ ಕೂಡ ನಾನು ಹೇಳುತ್ತೇನೆ. ಹೈಕಮಾಂಡ್ ತಪ್ಪು ಮಾಡುತ್ತಿದೆ. ಹೋಗಿ ಹೈಕಮಾಂಡಿಗೆ ನನ್ನ ವಿರುದ್ಧ ದೂರು ನೀಡಲಿ. ನನ್ನನ್ನು ಪಕ್ಷದಿಂದ ತೆಗೆಯಲಿ. ನಾನೂ ಅಲ್ಲೇ ಇದ್ದವನು. ಇವರಿಗೆಲ್ಲ ಹೊಸಬನಾಗಿ ಕಾಣುತ್ತಿರಬಹುದು. ಆದರೆ ಇಡೀ ಪಾರ್ಟಿಯನ್ನು ನಾನು ನೋಡುತ್ತಿದ್ದೇನೆ. ಇಲ್ಲದಿದ್ದರೆ ಹೈಕಮಾಂಡ್, ಪೂಜಾರಿ ನಮಗೆ ನೀವು ಹೊಸಬರು. ನಿಮಗೂ ನಮಗೂ ಸಂಬಂಧವೇ ಇಲ್ಲ ಎಂದು ಹೇಳಲಿ. ಆಗ ನಾನು ಸಂಬಂಧ ಇದೆಯೋ ಇಲ್ಲವೋ ಎಂಬುದನ್ನು ತೋರಿಸಿಕೊಡುತ್ತೇನೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಿಡಿಕಾರಿದರು.

ಎರಡು ಬಾರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಸೋತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಇರುವ ತನಕ ಕಾಂಗ್ರೆಸ್ಸಿಗೆ ಶನಿಯೇ ಎಂದರು.

ಮೈತ್ರಿ ಸರ್ಕಾರ ಪತನದ ಬಗ್ಗೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು ತಾಕತ್ತಿದ್ದರೆ ಅಮಿತ್ ಶಾ ಅವರು, ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಿ. ಇಲ್ಲವೆಂದಲ್ಲಿ ಅಮಿತ್ ಶಾ ಅವರ ಒಪ್ಪಿಗೆ ಇದೆ ಎಂದು ಆಗುತ್ತದೆ. ಅವರು ಹೇಳಿಯೇ 17 ಶಾಸಕರು ರಾಜೀನಾಮೆ ನೀಡಿರುವುದು ಎಂದಾಗುತ್ತದೆ. ಹೀಗಾಗಿ ಯಡಿಯೂರಪ್ಪ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಮಿತ್ ಶಾ ಸೂಚನೆಯಲ್ಲೇ ಸರ್ಕಾರ ಉರುಳಿಸಲಾಗಿತ್ತು. ಅಮಿತ್ ಶಾ ತಲೆಯಲ್ಲಿ ಬ್ರೈನ್ ಇರುವ ಮನುಷ್ಯ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *