ಇವಿಎಂ ಒಡೆದು ಹಾಕಿದ ಅಭ್ಯರ್ಥಿ!

Public TV
2 Min Read

ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೇ ಇವಿಎಂ ಒಡೆದು ಹಾಕಿದ ಘಟನೆ ಅನಂತರಪುರ ಜಿಲ್ಲೆಯ ಗುತ್ತಿಯಲ್ಲಿ ನಡೆದಿದೆ.

ಜನಸೇನಾ ಪಾರ್ಟಿ ಅಭ್ಯರ್ಥಿ ಮಧುಸೂದನ್ ಗುಪ್ತಾನೇ ಮತ ಯಂತ್ರವನ್ನು ಪೀಸ್ ಪೀಸ್ ಮಾಡಿರುವ ಅಭ್ಯರ್ಥಿಯಾಗಿದ್ದಾರೆ. ಪೋಲಿಂಗ್ ಬಾಕ್ಸ್ ಗೆ ಎಂಪಿ ಅಥವಾ ಎಂಎಲ್‍ಎ ಎಂದು ಪೋಸ್ಟ್ ಅಂಟಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗುಪ್ತಾ, ಇವಿಎಂ ಒಡೆದು ಹಾಕುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಜನ ಮತದಾನ ಮಾಡಲು ಬಂದಿದ್ದಾರೆ. ಆದ್ರೆ ಒಬ್ಬ ಪೊಲೀಸ್ ಸಿಬ್ಬಂದಿಯೂ ಇಲ್ಲದೇ ಜನ ಪರದಾಡಿದ್ದಾರೆ. ಈ ವೇಳೆ ಮಧುಸೂದನ್ ಗುಪ್ತಾ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ವಾಗ್ವಾದವೂ ನಡೆಯಿತು. ಸದ್ಯ ಆಂಧ್ರ ಪ್ರದೇಶದ ಪೊಲೀಸರು ಗುಪ್ತಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆಂಧ್ರದ ವಿಜಯನಗರ ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಅಶೋಕ್ ಗಜಪತಿರಾಜು, ವಿಶಾಖಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುರಂದರೇಶ್ವರಿ ಕಣದಲ್ಲಿದ್ದಾರೆ.

ಐಇಡಿ ಬ್ಲಾಸ್ಟ್!:
ಮತದಾನದ ದಿನ ಬೆಳ್ಳಂಬೆಳಗ್ಗೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಛತ್ತೀಸ್‍ಗಡದ ನಾರಾಯಣಪುರದಲ್ಲಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ. ಘಟನೆ ನಡೆದ ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

ಮೊದಲ ಹಂತದ ಮತದಾನ:
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಈಗಾಗಲೇ ಆರಂಭಗೊಂಡಿದ್ದು, 18 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಒಂದು ಲಕ್ಷದ 66 ಸಾವಿರ ಮತಗಟ್ಟೆಗಳಲ್ಲಿ 1961 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದದಲ್ಲಿ ನಿರ್ಧಾರ ಆಗಲಿದೆ. ಕ್ಷೇತ್ರವಾರು ಮತದಾನಕ್ಕೆ ಚುನಾವಣಾ ಆಯೋಗ ಸಮಯ ನಿಗದಿ ಮಾಡಿದ್ದು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ನಲ್ಲಿ ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆ, ಉತ್ತಾರಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಏಳರಿಂದ ಸಂಜೆ ಐದು ಗಂಟೆ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ, ತ್ರಿಪುರ, ಮಣಿಪುರ, ನಾಗಲ್ಯಾಂಡ್, ಮೇಘಾಲಯ ದಲ್ಲಿ ಬೆಳಗ್ಗೆ ಏಳರಿಂದ ಸಂಜೆ ನಾಲ್ಕು ಗಂಟೆವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಸರಕಾರದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ಸುರಕ್ಷತೆಗೆ ನೇಮಕ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *