ಖಾಸಗಿಯವರ ಪಾಲಾಗಿದೆ ಜನ ಔಷಧಿ ಕೇಂದ್ರ- ಔಷಧಗಳು ನೋ ಸ್ಟಾಕ್!

Public TV
1 Min Read

ಕಾರವಾರ: ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಔಷಧಗಳು ದೊರೆಯಲಿ ಅನ್ನೋ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಜನ ಔಷಧಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಈ ಕೇಂದ್ರಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ದೊರೆಯುತ್ತಿಲ್ಲ ಅನ್ನೋದಕ್ಕೆ ಜಿಲ್ಲೆಯ ಹಲವಾರು ಕೇಂದ್ರಗಳು ಸಾಕ್ಷಿಯಾಗಿವೆ.

ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೂಡ ಜನ ಔಷಧಿ ಕೇಂದ್ರಗಳನ್ನ ತೆರೆಯಲಾಗಿದೆ. ಈ ಕೇಂದ್ರಗಳೆಲ್ಲ ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಸಲ್ಪಡುತ್ತಿವೆ. ಈ ಕೇಂದ್ರಗಳಲ್ಲಿ ಜನ ಔಷಧಿ ಮಾರ್ಕಿನ ಔಷಧಗಳು ದೊರೆಯುತ್ತಿಲ್ಲ ಅನ್ನೋದು ಈಗ ಚರ್ಚೆಗೆ ಗ್ರಾಸವಾಗಿರೋ ವಿಷಯ. ಕೇಂದ್ರ ಸರ್ಕಾರ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಔಷಧಗಳನ್ನ ಅಗ್ಗದ ದರದಲ್ಲಿ ನೀಡುವುದಕ್ಕಾಗಿ ಜನ ಔಷಧಿ ಎನ್ನುವ ಮಾರ್ಕಿನ ಔಷಧಗಳನ್ನ ಪರಿಚಯಿಸಿತು. ಆದರೆ ಇದರಲ್ಲಿ ಹಲವಾರು ಔಷಧಗಳು ದೊರೆಯದೇ ‘ನೋ ಸ್ಟಾಕ್’ ಬೋರ್ಡ್ ಬಿದ್ದ ಕಾರಣದಿಂದ ಜೆನೆರಿಕ್ ಔಷಧಗಳನ್ನ ಮಾರಾಟ ಮಾಡೋಕೆ ಅನುಮತಿ ನೀಡಲಾಯಿತು.

 

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜನ ಔಷಧಿ ಕೇಂದ್ರಗಳಲ್ಲಿ ನೋ ಸ್ಟಾಕ್ ಎಂಬ ಪದ ಕೇಳಿ ಬರುತ್ತದೆ. ಬೇರೆ ಜಿಲ್ಲೆಗಳಲ್ಲಿ ಈ ಔಷಧಿಗಳು ಲಭ್ಯವಾಗುತ್ತಿದ್ದರೂ, ನಮ್ಮಲ್ಲಿ ಯಾಕೆ ಇಲ್ಲ ಎಂದು ಸಾರ್ವಜನಿರಕು ಪ್ರಶ್ನಿಸುತ್ತಿದ್ದಾರೆ. ಲಭ್ಯವಿರದ ಈ ಜನೌಷಧಿಗಳ ಬದಲಾಗಿ ತಮ್ಮದೇ ಸ್ವಂತ ಬ್ರಾಂಡ್ ನ ಜೆನೆರಿಕ್ ಔಷಧಗಳನ್ನ ನೀಡ್ತಾರೆ ಅನ್ನೋ ದೂರು ಶಿರಸಿ ಭಾಗದ ಸಾರ್ವಜನಿಕ ವಲಯಗಳಿಂದ ಕೇಳಿ ಬಂದಿದೆ.

ಒಟ್ಟಿನಲ್ಲಿ ಬಡಜನರಿಗೆ ಉಪಯೋಗವಾಗಬೇಕಿದ್ದ ಒಂದು ಯೋಜನೆ, ಖಾಸಗಿಯವರ ಲಾಭಕ್ಕಾಗಿ ದುರ್ಬಳಕೆ ಆಗುತ್ತಿರುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರೋ ತೊಂದರೆಗಳನ್ನ ಶೀಘ್ರವಾಗಿ ಬಗೆಹರಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *