ಗುಂಡಿನ ಚಕಮಕಿ- ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Public TV
1 Min Read

ಶ್ರೀನಗರ: ಉಗ್ರರು ಹಾಗೂ ಸೇನೆ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಭಾನುವಾರ ಬೆಳಗ್ಗೆ ದಕ್ಷಿಣ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ವಾಟ್ರಿಗಾಮ ಗ್ರಾಮದಲ್ಲಿ ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಸಾವನ್ನಪ್ಪಿದವರನ್ನು ಅನಂತ್‍ನಾಗ್‍ನ ಹಿಝ್ಬುಲ್ ಮುಜಾಹಿದ್ದೀನ್ ಕಮಾಂಡರ್ ತರೀಕ್ ಅಹ್ಮದ್ ಹಾಗೂ ಲಷ್ಕರ್-ಇ-ತೈಬಾ(ಎಲ್‍ಇಟಿ) ಸಂಘಟನೆಗೆ ಸೇರಿದ ಇತರ ಮೂವರು ಎಂದು ಗುರುತಿಸಲಾಗಿದೆ.

ಸೇನೆಯ 19 ರಾಷ್ಟ್ರೀಯ ರೈಫಲ್ಸ್(ಆರ್‍ಆರ್), ಸ್ಪೆಷಲ್ ಆಪರೇಷನ್ಸ್ ಗ್ರೂಪ್(ಎಸ್‍ಒಜಿ) ಜಂಟಿ ಕಾರ್ಯಾಚರಣೆ ನಡೆಸಿ ವಾಟ್ರಿಗಾಮ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯಗೈದಿದ್ದಾರೆ. ಕೆಲವೇ ಗಂಟೆಗಳ ಮುಂಚೆ ಉಗ್ರರು ಅಡಗಿರುವ ಕುರಿತು ಗುಪ್ತಚರ ದಳ ಮಾಹಿತಿ ನೀಡುತ್ತಿದ್ದಂತೆ ಸೇನೆಯ ತಂಡ ದಾಳಿ ನಡೆಸಿದೆ.

ಅಚಬಲ್ ಮತ್ತು ಅನಂತ್‍ನಾಗ್ ಸೇರಿದಂತೆ ಹಳ್ಳಿಯ ಎಲ್ಲ ಪ್ರವೇಶ ಕೇಂದ್ರಗಳನ್ನು ಭದ್ರತಾ ಪಡೆ ಸುತ್ತುವರಿದು, ಮನೆ ಮನೆ ತೆರಳಿ ಶೋಧ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಗುಂಡು ಹಾರಿಸಿದ್ದು, ನಂತರ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಈ ಹಿಂದೆ ಉಗ್ರರು ಈ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *